‘ಕೈ’ ಬಿಕ್ಕಟ್ಟು: ಗೆಹ್ಲೋಟ್- ಪೈಲಟ್ ಬಣಗಳ ನಡುವೆ ಕಮಲ್ ನಾಥ್ ಮಧ್ಯಸ್ಥಿಕೆ
ದೆಹಲಿಗೆ ಮರಳಿದ ಖರ್ಗೆ, ಅಜಯ್ ಮಾಕನ್.... ಬಿಜೆಪಿ ಲೇವಡಿ
Team Udayavani, Sep 26, 2022, 4:50 PM IST
ಜೈಪುರ/ ನವದೆಹಲಿ : ರಾಜಸ್ಥಾನ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬಣಗಳ ನಡುವಿನ ಬಿಕ್ಕಟ್ಟಿನ ಮಧ್ಯಸ್ಥಿಕೆ ವಹಿಸಲು ಕಮಲ್ ನಾಥ್ ಅವರನ್ನು ನೇಮಿಸಲಾಗಿದೆ. ಈ ನಡುವೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರು ಸೋಮವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಯನ್ನು ತಲುಪಿದ್ದು, ಬಿಕ್ಕಟ್ಟಿನ ಕುರಿತು ಚರ್ಚಿಸಲು ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ : ಗುಜರಾತ್ನ ಸ್ವಚ್ಛತಾ ಕಾರ್ಮಿಕನ ಕುಟುಂಬಕ್ಕೆ ಕೇಜ್ರಿವಾಲ್ ನಿವಾಸದಲ್ಲಿ ಆತಿಥ್ಯ
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ, ರಾಜ್ಯದ ಮುಂದಿನ ಸಿಎಂ ಯಾರು ಎಂಬ ಗೊಂದಲ ಮುಂದುವರಿದಿದೆ. ರವಿವಾರ ಏಕಾಏಕಿ ಗೆಹ್ಲೋಟ್ ಬಣದ 82 ಶಾಸಕರು ಸ್ಪೀಕರ್ ಸಿ.ಪಿ.ಜೋಷಿಗೆ ರಾಜೀನಾಮೆ ಸಲ್ಲಿಸಿದ್ದರು. ಇದು ಹೈಕಮಾಂಡ್ಗೆ ಹೊಸ ತಲೆನೋವು ಉಂಟುಮಾಡಿದೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ನಾನು ಎಐಸಿಸಿ ವೀಕ್ಷಕರಾಗಿ ಸಿಎಂ ನಿವಾಸದಲ್ಲಿ ಸಿಎಂ ಅನುಕೂಲಕ್ಕೆ ತಕ್ಕಂತೆ ಸಭೆ ನಡೆಸಲು ಬಂದಿದ್ದೆವು. ಬರದ ಶಾಸಕರಿಗೆ ಮಾತನಾಡಿ ಎಂದು ನಿರಂತರವಾಗಿ ಹೇಳುತ್ತಿದ್ದೆವು ಎಂದು ಅಜಯ್ ಮಾಕನ್ ಹೇಳಿದ್ದಾರೆ.
ನಾವು 10 ಜನಪಥ್ಗೆ ಹೋಗುತ್ತಿದ್ದೇವೆ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತೇವೆ. ನಾವು ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಅವರಿಗೆ ತಿಳಿಸುತ್ತೇವೆ. ಅವರು ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಜೈಪುರದಿಂದ ದೆಹಲಿಗೆ ಆಗಮಿಸಿದ ನಂತರ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಬ್ಬರೂ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರು ಇಂದು ಪಕ್ಷದ ಉನ್ನತ ನಾಯಕತ್ವಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ. ಅವರು ಜೈಪುರದಲ್ಲಿ ಗೆಹ್ಲೋಟ್ ನಿಷ್ಠಾವಂತ ಪ್ರತಾಪ್ ಖಚರಿಯಾವಾಸ್ ಮತ್ತು ಶಾಂತಿ ಧರಿವಾಲ್ ಅವರೊಂದಿಗೆ ಸಭೆ ನಡೆಸಿದ್ದರು.
ರವಿವಾರ ಪಕ್ಷದ ಹಿರಿಯ ನಾಯಕರಾದ ಖರ್ಗೆ ಹಾಗೂ ಅಜಯ್ ಮಾಕನ್ ಸಮ್ಮುಖದಲ್ಲಿ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಬಿಜೆಪಿ ಲೇವಡಿ
”ರಾಜಸ್ಥಾನದಲ್ಲಿ ಕಾದಾಡುತ್ತಿರುವ ಬಣಗಳ ನಡುವೆ ಮಧ್ಯಸ್ಥಿಕೆ ವಹಿಸಲು ಕಮಲ್ ನಾಥ್ ಅವರನ್ನು ನಿಯೋಜಿಸಲಾಗಿದೆ. ಸ್ಪಷ್ಟವಾಗಿ ಗಾಂಧಿಯವರಿಗೆ ಅವರ ಅಸಾಮರ್ಥ್ಯದ ಕುರಿತು ವಿಶ್ವಾಸಾರ್ಹತೆ ಉಳಿದಿದೆಯೇ? ವಿಪರ್ಯಾಸವೆಂದರೆ ಮಧ್ಯಪ್ರದೇಶದ ಗುಂಪುಗಾರಿಕೆಯ ಹಿಂದಿನ ಪ್ರಮುಖ ನಾಯಕ ಗುಂಪುಗಾರಿಕೆಯನ್ನು ಪರಿಹರಿಸಲು ಅವರ ಆಯ್ಕೆ! ಅದ್ಭುತ” ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಪರಿಹಾರ ಕಂಡುಕೊಳ್ಳುತ್ತದೆ
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ, ಇದು ಪಕ್ಷದೊಳಗಿನ ವಿಷಯವಾಗಿರುವುದರಿಂದ ಕಾಂಗ್ರೆಸ್ ಪರಿಹಾರ ಕಂಡುಕೊಳ್ಳುತ್ತದೆ. ಪರಿಸ್ಥಿತಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಗೆಹ್ಲೋಟ್ ಅವರ ರಾಜೀನಾಮೆಯನ್ನು ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಅದು ಸಂಭವಿಸಿದಾಗ ಅದನ್ನು ಪರಿಶೀಲಿಸುವುದಾಗಿ ಹೇಳಿದರು.