ಹುತಾತ್ಮರ ನವೀಕೃತ ಸ್ಮಾರಕ ಲಡಾಖ್ನಲ್ಲಿ ಲೋಕಾರ್ಪಣೆ
Team Udayavani, Nov 19, 2021, 6:45 AM IST
ಹೊಸದಿಲ್ಲಿ: ಲಡಾಖ್ನ “ರೆಜಾಂಗ್ ಲಾ’ ಎಂಬಲ್ಲಿ ಹುತಾತ್ಮ ಯೋಧರ ನವೀಕರಣಗೊಳಿಸಲಾಗಿರುವ ಸ್ಮಾರಕವನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಗುರುವಾರ ಉದ್ಘಾಟಿಸಿದರು. ಸಮುದ್ರ ಮಟ್ಟದಿಂದ ಸುಮಾರು 18,000 ಅಡಿಗಳಷ್ಟು ಎತ್ತರ ವಿರುವ ಈ ಪ್ರದೇಶದಲ್ಲಿ ಆರು ದಶಕಗಳ ಹಿಂದೆ ಭಾರತ ಮತ್ತು ಚೀನ ನಡುವೆ ಯುದ್ಧ ನಡೆದಿತ್ತು. ಆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗಾಗಿ ಇಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಇತ್ತೀಚೆಗೆ ಇದನ್ನು ನವೀಕರಿಸಲಾಗಿದೆ.
ಸ್ಮಾರಕ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಂಗ್, “ಈ ಸ್ಮಾರಕವು ಭಾರತೀಯ ಸೇನೆಯ ಬದ್ಧತೆ ಹಾಗೂ ಧೈರ್ಯದ ಪ್ರತೀಕ. ಇದೇ ಧೈರ್ಯ ಮತ್ತು ಬದ್ಧತೆಗಳನ್ನು ಭಾರತೀಯ ಯೋಧರು ಇಂಡೋ-ಚೀನ ಯುದ್ಧದಲ್ಲಿ ಪ್ರದರ್ಶಿಸಿದ್ದರು. ಅವರ ತ್ಯಾಗ, ಬಲಿದಾನಗಳು ಇತಿಹಾಸದ ಪುಟಗಳನ್ನು ಸೇರಿದ್ದು, ನಮ್ಮ ಹೃನ್ಮನಗಳಲ್ಲೂ ಚಿರಸ್ಥಾಯಿಯಾಗಿ ಉಳಿದಿದೆ’ ಎಂದಿದ್ದಾರೆ.
ನಿವೃತ್ತ ಸೇನಾಧಿಕಾರಿಯ ಸೇವೆ ಮಾಡಿದ ಸಿಂಗ್ :
ಉದ್ಘಾಟನ ಸಮಾರಂಭಕ್ಕೆ 1962ರ ಇಂಡೋ-ಚೀನ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಬ್ರಿಗೇಡಿಯರ್ ಆರ್.ವಿ. ಜತಾರ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ವ್ಹೀಲ್ಚೇರ್ನಲ್ಲಿ ಆಗಮಿಸಿದ್ದ ಆ ಹಿರಿಯ ಜೀವವನ್ನು ಸ್ವಾಗತಿಸಿದ ರಾಜನಾಥ್ ಸಿಂಗ್, ತಾವೇ ಖುದ್ದಾಗಿ ವ್ಹೀಲ್ಚೇರ್ ದಬ್ಬಿಕೊಂಡು ಅವರನ್ನು ಹುತಾತ್ಮರ ಸ್ಮಾರಕದ ಬಳಿ ಕೊಂಡೊಯ್ದಿದ್ದು ಹೃದಯಸ್ಪರ್ಶಿಯಾಗಿತ್ತು.