ಇಂದು ರಾಮಮಂದಿರ ಭೂ ವಿವಾದ ವಿಚಾರಣೆ
Team Udayavani, Oct 29, 2018, 8:48 AM IST
ಹೊಸದಿಲ್ಲಿ: ದೇಶಾದ್ಯಂತ ಕುತೂಹಲ ಕೆರಳಿಸಿರುವ ಅಯೋಧ್ಯೆಯ ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯು ಸೋಮವಾರ ನಡೆಯುವ ಸಾಧ್ಯತೆಯಿದೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಸೋಮವಾರ ಕೈಗೆತ್ತಿಕೊಳ್ಳಲಿದೆ.
ನ್ಯಾ| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಕೆ.ಎಂ. ಜೋಸೆಫ್ ಅವರೂ ನ್ಯಾಯಪೀಠದಲ್ಲಿ ಇರಲಿದ್ದಾರೆ. ಭೂ ವಿವಾದದ ವಿಚಾರಣೆ ವೇಳೆ ಎದ್ದಿದ್ದ ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವೇ ಎಂಬ ಪ್ರಶ್ನೆಗೆ ಸಂಬಂಧಿಸಿ
ಸೆ.27ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಅ.29ರಂದು ಅಯೋಧ್ಯೆ ಭೂವಿವಾದದ ವಿಚಾರಣೆಯು ಮೂವರು ನ್ಯಾಯ ಮೂರ್ತಿಗಳ ಪೀಠದಿಂದ ನಡೆಯಲಿದೆ ಎಂದಿತ್ತು.
ಜತೆಗೆ ಪ್ರಕರಣದ ವಿಚಾರಣೆಯನ್ನು ಕೇವಲ ಭೂವಿವಾದ ಎಂಬಂತೆ ವಿಚಾರಣೆ ನಡೆಸುವುದಾಗಿಯೂ ಸ್ಪಷ್ಟಪಡಿಸಿತ್ತು.