ಅತ್ಯಾಚಾರ ಆರೋಪ: ಬಿಷಪ್ ಅಧಿಕಾರ ಹಸ್ತಾಂತರ
Team Udayavani, Sep 16, 2018, 11:31 AM IST
ತಿರುವನಂತಪುರಂ: ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರದ ಆರೋಪ ಹೊತ್ತಿರುವ ಜಲಂಧರ ಚರ್ಚ್ನ ಪಾದ್ರಿ ಫ್ರಾಂಕೋ ಮುಲಕ್ಕಲ್, ವಿಚಾರಣೆಗೆ ಹಾಜರಾ ಗುವಂತೆ ಪೊಲೀಸರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಅಧಿಕಾರವನ್ನು ಮಾನ್ಸಿಗ್ನರ್ ಮ್ಯಾಥ್ಯೂ ಕೊಕ್ಕಂಡಮ್ಗೆ ಹಸ್ತಾಂತರಿಸಿದ್ದಾರೆ. ಆದರೆ ರಾಜೀನಾಮೆ ನೀಡಿಲ್ಲ. ಅಷ್ಟೇ ಅಲ್ಲ, ಯಾರನ್ನೂ ಬಿಷಪ್ ಆಗಿಯೂ ನೇಮಕ ಮಾಡಿಲ್ಲ.
ನನ್ನ ವಿರುದ್ಧದ ಆರೋಪಗಳ ಬಗ್ಗೆ ಮಾಧ್ಯಮಗಳಿಂದ ನೀವು ತಿಳಿದಿರಬಹುದು. ತನಿಖೆ ವರದಿಗಳಲ್ಲಿ ವೈರುಧ್ಯಗಳಿದ್ದು, ನನ್ನನ್ನು ಹೆಚ್ಚುವರಿ ಸ್ಪಷ್ಟೀಕರಣಕ್ಕಾಗಿ ಆಹ್ವಾನಿಸ ಬಹುದಾಗಿದೆ. ನನ್ನ ಗೈರು ಹಾಜರಾತಿಯಲ್ಲಿ ಮ್ಯಾಥ್ಯೂ ಕೊಕ್ಕಂಡಮ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಲಕ್ಕಲ್ ಬರೆದಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಸುತ್ತೋಲೆಯನ್ನು ಸೆ. 13ರಂದೇ ಹೊರಡಿಸಲಾಗಿದೆ. ಮ್ಯಾಥ್ಯೂ ಸದ್ಯ ಅಮೃತಸರದ ಜಲಂಧರದಲ್ಲಿರುವ ಚರ್ಚ್ನ ನೇತೃತ್ವ ವಹಿಸಿದ್ದಾರೆ. ಸಾಮಾನ್ಯವಾಗಿ ಚರ್ಚ್ನ ನ್ಯಾಯವ್ಯಾಪ್ತಿಯಿಂದ ಬಿಷಪ್ ಹೊರ ಹೋಗುವಾಗ ಈ ರೀತಿ ಹಿರಿಯ ಚರ್ಚ್ ಅಧಿಕಾರಿಗೆ ಆಡಳಿತವನ್ನು ಹಸ್ತಾಂತರಿಸುತ್ತಾರೆ.
ಇನ್ನೊಂದೆಡೆ ಕ್ಯಾಥೋಲಿಕ್ ಪಾದ್ರಿಗಳು ಶನಿವಾರವೂ ಕ್ರೈಸ್ತ ಸನ್ಯಾಸಿನಿಯನ್ನು ಬೆಂಬಲಿಸಿ ದೇಶದ ಹಲವೆಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮುಲಕ್ಕಲ್ ಸೆ. 19ರಂದು ವಿಚಾರಣೆಗೆ ಹಾಜರಾಗು ವಂತೆ ಪೊಲೀಸ್ ಸಮನ್ಸ್ನಲ್ಲಿ ತಿಳಿಸಲಾಗಿದೆ.