3 ಕೋಟಿ ಪಡಿತರ ಚೀಟಿ ರದ್ದಾಗಿಲ್ಲ: ಕೇಂದ್ರ ಸ್ಪಷ್ಟನೆ
Team Udayavani, Feb 25, 2020, 8:13 AM IST
ಹೊಸದಿಲ್ಲಿ: ಜಾರ್ಖಂಡ್ನಲ್ಲಿ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಆರೋಪ, ದೇಶಾದ್ಯಂತ ಮೂರು ಕೋಟಿ ಬಡವರ ಪಡಿತರ ಚೀಟಿ ರದ್ದುಪಡಿಸಲಾಗಿದೆ ಎಂಬ ಆರೋಪವನ್ನು ಕೇಂದ್ರ ಸರಕಾರ ನಿರಾಕರಿಸಿದೆ. ಇದೊಂದು ಸುಳ್ಳು ಆರೋಪ ಎಂಬುದನ್ನು ಸಾಬೀತುಪಡಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್ನಲ್ಲಿ ಪ್ರತಿಪಾದಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರ ನ್ನೊಳಗೊಂಡ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋ ಪಾಲ್, ಆಧಾರ್ ಇಲ್ಲದ ಕಾರಣಕ್ಕೆ ಪಡಿತರ ಆಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಹಸಿವಿನಿಂದ ಬಾಲಕಿಯೊಬ್ಬಳು ಜಾರ್ಖಂಡ್ನಲ್ಲಿ ಮೃತಪಟ್ಟಿದ್ದಾಳೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಚೀಟಿ ರದ್ದು ಪಡಿಸಿರುವ ಅಂಕಿಅಂಶಗಳು ಕೂಡ ತಪ್ಪು ಎಂದಿದ್ದಾರೆ.