ಪ್ರತಿಪಕ್ಷಗಳ ವಿರುದ್ಧ ಭೈರಪ್ಪ ಗರಂ; ಋಣಾತ್ಮಕತೆ ತುಂಬುವುದೇ ವಿರೋಧ ಪಕ್ಷಗಳ ನಾಯಕರ ಕೆಲಸ
ಗುಜರಾತ್ ಬಿಟ್ಟು ಬೇರೆಲ್ಲಾ ರಾಜ್ಯಗಳಲ್ಲೂ ಜಾತೀಯತೆಯಿದೆ
Team Udayavani, May 8, 2022, 8:23 PM IST
ಪುಣೆ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸತತವಾಗಿ ಕಿಡಿಕಾರುತ್ತಿರುವ ವಿರೋಧ ಪಕ್ಷಗಳ ಬಗ್ಗೆ ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇತ್ತೀಚೆಗೆ ನಡೆಸಿದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, “ವಿರೋಧ ಪಕ್ಷಗಳು ಧನಾತ್ಮಕವಾಗಿ ಏನನ್ನೂ ಮಾತನಾಡುತ್ತಿಲ್ಲ. ದೇಶಾದ್ಯಂತ ಋಣಾತ್ಮಕತೆಯನ್ನು ಹಬ್ಬಿಸುವ ಕೆಲಸವನ್ನೇ ಮಾಡುತ್ತಿವೆ. ಸೇನೆ ನಡೆಸುತ್ತಿರುವ ಸರ್ಜಿಕಲ್ ಸ್ಟ್ರೈಕ್ಗಳನ್ನು ಪ್ರಶಂಶಿಸುವ ಬದಲು ಸಾಕ್ಷಿ ಕೇಳುತ್ತಿವೆ. ನಮ್ಮ ದೇಶದ ಸೇನೆಯನ್ನೇ ಪ್ರಶ್ನಿಸುತ್ತಿವೆ’ ಎಂದು ದೂರಿದ್ದಾರೆ.
“ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದ್ದು ದೇಶದಲ್ಲಾದ ಒಂದು ಅತ್ಯುತ್ತಮ ಕೆಲಸ. ಆದರೆ ಅಂತಹ ಒಳ್ಳೆಯ ಕೆಲಸವನ್ನು ಒಪ್ಪಿಕೊಳ್ಳುವಲ್ಲಿ ಪ್ರತಿಪಕ್ಷಗಳು ಸೋಲುತ್ತಿವೆ. ಎಲ್ಲ ನಾಯಕರೂ ತಾವು ಜಾತ್ಯತೀತರೆಂದು ಹೇಳಿಕೊಳ್ಳುತ್ತಾರಾದರೂ ಎಲ್ಲರೂ ಜಾತೀಯತೆಯ ಕೆಲಸವನ್ನೇ ಮಾಡುತ್ತಾರೆ. ಗುಜರಾತ್ ಬಿಟ್ಟು ದೇಶದ ಬೇರೆಲ್ಲಾ ರಾಜ್ಯಗಳಲ್ಲೂ ಜಾತೀಯತೆಯಿದೆ.
ಗುಜರಾತ್ನಲ್ಲಿ ಈ ತಡೆಯಿಲ್ಲವಾದ್ದರಿಂದಲೇ ಆ ರಾಜ್ಯ ಅಭಿವೃದ್ಧಿಯಾಗುತ್ತಿದೆ ಮತ್ತು ಮೋದಿಯಂತಹ ಸಾಮಾನ್ಯ ಮನುಷ್ಯ 3 ಬಾರಿ ಸಿಎಂ ಆಗಿದ್ದಾರೆ’ ಎಂದು ಭೈರಪ್ಪ ಹೇಳಿದ್ದಾರೆ.