ನ್ಯಾಯಾಂಗ ನಿಂದನೆ ಪ್ರಕರಣ; “ಸುಪ್ರೀಂ” ನಲ್ಲಿ ಕ್ಷಮೆ ಕೇಳಲು ಪ್ರಶಾಂತ್ ಭೂಷಣ್ ನಕಾರ
ಈ ನಂಬಿಕೆಯ ಆಧಾರದಲ್ಲಿ ಷರತ್ತು ಅಥವಾ ಬೇಷರತ್ತಾಗಿ ಕ್ಷೆಮೆಯಾಚಿಸಿದರೆ ಅದು ಕಪಟವಾಗುತ್ತದೆ.
Team Udayavani, Aug 24, 2020, 3:07 PM IST
ನವದೆಹಲಿ:ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವ ವಕೀಲ ಪ್ರಶಾಂತ್ ಭೂಷಣ್ “ತಾನು ಕ್ಷಮೆಕೋರುವುದಿಲ್ಲ” ಎಂಬ ಹೇಳಿಕೆನ್ನು ಸುಪ್ರೀಂಕೋರ್ಟ್ ಗೆ ಸೋಮವಾರ (ಆಗಸ್ಟ್ 24, 2020) ಸಲ್ಲಿಸಿದ್ದಾರೆ.
“ನಾನು ಮಾಡಿರುವ ಟ್ವೀಟ್ ಗಳ ಬಗ್ಗೆ ಕ್ಷಮೆ ಕೋರಲಾರೆ, ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾಜದ ಸುಧಾರಣೆಗೆ ಟೀಕೆಗಳು ಅಗತ್ಯ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನನ್ನ ಟ್ವೀಟ್ ಗಳನ್ನು ಪರಿಗಣಿಸಬೇಕಿತ್ತು. ಈ ನಂಬಿಕೆಯ ಆಧಾರದಲ್ಲಿ ಷರತ್ತು ಅಥವಾ ಬೇಷರತ್ತಾಗಿ ಕ್ಷೆಮೆಯಾಚಿಸಿದರೆ ಅದು ಕಪಟವಾಗುತ್ತದೆ. ಕ್ಷಮೆಯಾಚನೆ ಕೇವಲ ಒಂದು ಮಂತ್ರವಾಗಬಾರದು. ಯಾವುದೇ ಕ್ಷಮೆಯಾಚನೆ ಇರಲಿ ಅದು ನ್ಯಾಯಾಲಯದಲ್ಲಿ ಹೇಳುವಂತೆ ಪ್ರಾಮಾಣಿಕವಾಗಿರಬೇಕು” ಎಂದು ಭೂಷಣ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಣ ಎಸ್. ಎ. ಬೋಬ್ದೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದ ವಕೀಲ ಪ್ರಶಾಂತ್ ಭೂಷಣ್ರನ್ನು ಸರ್ವೋಚ್ಚ ನ್ಯಾಯಾಲಯವು “ದೋಷಿ’ ಎಂದು ಘೋಷಿಸಿತ್ತು. ಪ್ರಶಾಂತ್ ಭೂಷಣ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ತೀರ್ಪಿನಲ್ಲಿ ಅವರು ಮಾಡಿದ್ದ ಪ್ರಮುಖ 2 ಟ್ವೀಟ್ಗಳನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೊಳಪಡಿಸಿತ್ತು. ಈ ಕುರಿತು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಶಾಂತ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.
ಮುಳುವಾದ 2 ಟ್ವೀಟ್: “ಸುಪ್ರೀಂನ ಹಿಂದಿನ 6 ಸಿಜೆಐಗಳು ಕಳೆದ 6 ವರ್ಷಗಳಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರದೆ ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದಾರೆ’, “ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ’ ಎಂದು ಪ್ರಶಾಂತ್ ಟ್ವೀಟ್ನಲ್ಲಿ ನಿಂದಿ ಸಿದ್ದರು. ವಾಸ್ತವವಾಗಿ, ಸ್ಟಾಂಡ್ ಹಾಕಿದ್ದ ಬೈಕ್ ಮೇಲೆ ನ್ಯಾಣ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು.