ರೈತರ ಪ್ರತಿಭಟನೆ: ಗ್ರೆಟಾಗೆ ಟೂಲ್ ಕಿಟ್ ರಚಿಸಿ ಸಂಚು ರೂಪಿಸಿದ್ದು ಯಾರು?ಹೆಸರು ಬಹಿರಂಗ
ದೊಡ್ಡ ಮಟ್ಟದ ಸಂಚು ಇದಾಗಿತ್ತು ಎಂಬುದಕ್ಕೆ ಟೂಲ್ ಕಿಟ್ ಪುರಾವೆ ಒದಗಿಸಿದಂತಾಗಿದೆ
Team Udayavani, Feb 5, 2021, 3:05 PM IST
ನವದೆಹಲಿ: ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಸ್ವೀಡನ್ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ವಿವಾದಿತ ಟ್ವೀಟ್ ಮತ್ತು ಟೂಲ್ ಕಿಟ್ ಬಗ್ಗೆ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ ಬೆನ್ನಲ್ಲೇ ಗ್ರೆಟಾಗೆ ಟೂಲ್ ಕಿಟ್ ಅನ್ನು ರಚಿಸಿಕೊಟ್ಟ ವ್ಯಕ್ತಿ ಯಾರು ಎಂಬುದನ್ನು ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉಪ್ಪಿನಂಗಡಿ: ಸಿಮೆಂಟ್ ಮಿಕ್ಸರ್ ವಾಹನ- ಬೈಕ್ ನಡುವೆ ಅಪಘಾತ, ಮಹಿಳೆ ಸಾವು
ಯಾರೀತ ಎಂ ಒ ಧಾಲಿವಾಲ್?
ಮೂಲಗಳ ಪ್ರಕಾರ, ಪೀಸ್ ಫಾರ್ ಜಸ್ಟೀಸ್ ಸಂಘಟನೆಯನ್ನು ಸ್ಥಾಪಿಸಿದ್ದ ಎಂ ಒ ಧಾಲಿವಾಲ್ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರೆಟಾ ಥನ್ ಬರ್ಗ್ ಗೆ ಟೂಲ್ ಕಿಟ್ ಅನ್ನು ರಚಿಸಿರುವ ಮಹತ್ವದ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬೆಂಬಲ ಪಡೆಯುವ ನಿಟ್ಟಿನಲ್ಲಿ ಈ ಟೂಲ್ ಕಿಟ್ ಅನ್ನು ರಚಿಸಿದ್ದಲ್ಲದೇ ಇದನ್ನು ದೊಡ್ಡ ಪ್ರಮಾಣದ ಬಿರುಕನ್ನು ಉಂಟು ಮಾಡುವ ಸಂಚಿನ ಭಾಗವಾಗಿ ಗ್ರೆಟಾ ಥನ್ ಬರ್ಗ್ ಗೆ ನೀಡಲಾಗಿತ್ತು ಎಂದು ವಿವರಿಸಿದೆ.
ಧಾಲಿವಾಲ್ ಭಾರತದ ಭದ್ರತಾ ಏಜೆನ್ಸಿಯ ಕಣ್ಗಾವಲಿನಲ್ಲಿದ್ದು, ಈತ ಖಲಿಸ್ತಾನಿ ಪರ ಸಹಾನುಭೂತಿ ಹೊಂದಿದ್ದು, ವಿದೇಶದಲ್ಲಿ ನಡೆದ ಹಲವು ಭಾರತದ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಾಗಿ ವರದಿ ತಿಳಿಸಿದೆ.
ಕೆನಡಾ ಮೂಲದ ಧಾಲಿವಾಲ್ ಸ್ವಯಂಘೋಷಿತ ಸಿಖ್ ಪ್ರತ್ಯೇಕತವಾದಿಯಾಗಿದ್ದು, ಖಲಿಸ್ತಾನಿ ಉನ್ನತ ಮುಖಂಡರ ನಿಕಟವರ್ತಿಯಾಗಿದ್ದಾನೆ. ಪಿಆರ್ ಏಜೆನ್ಸಿ ಸೇರಿದಂತೆ ಹಲವಾರು ಗುಪ್ತಚರ ಸಂಸ್ಥೆಗಳು ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ವಿವಾದಿತ ಟೂಲ್ ಕಿಟ್ ನ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ರೈತರ ಹೋರಾಟದ ಮೂಲಕ ಬೆಂಬಲ ಪಡೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಸಂಚು ಇದಾಗಿತ್ತು ಎಂಬುದಕ್ಕೆ ಟೂಲ್ ಕಿಟ್ ಪುರಾವೆ ಒದಗಿಸಿದಂತಾಗಿದೆ ಎಂದು ವರದಿ ಹೇಳಿದೆ.
ಜನವರಿ 26ರಂದು ಭಾರತದ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ಹಿಂಸಾಚಾರ ನಡೆಸಿದ ದಿನವೇ ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿ ಹೊರಭಾಗದಲ್ಲಿ ಧಾಲಿವಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ಸಂದರ್ಭದಲ್ಲಿ ನಮ್ಮ ಮುಖ್ಯ ಗುರಿ ಭಾರತವನ್ನು ಹಲವು ಭಾಗಗಳಾಗಿ ವಿಭಜಿಸುವುದಾಗಿದೆ ಎಂದು ಭಾಷಣ ಮಾಡಿರುವುದು ವಿಡಿಯೋ ಕ್ಲಿಪ್ ನಲ್ಲಿ ದಾಖಲಾಗಿದೆ. ಧಾಲಿವಾಲ್ ಚಿಕ್ಕಪ್ಪ, ಖಲಿಸ್ತಾನಿ ಉಗ್ರ 1984ರಲ್ಲಿ ಭಾರತದ ಭದ್ರತಾ ಪಡೆ ನಡೆಸಿದ ಬ್ಲೂ ಸ್ಟಾರ್ ಆಪರೇಶನ್ ನಲ್ಲಿ ಹತ್ಯೆಗೈದಿತ್ತು.
ಗ್ರೆಟಾ ಥನ್ ಬರ್ಗ್ ಟೂಲ್ ಕಿಟ್ ಅನ್ನು ಯಾರು ರಚಿಸಿದ್ದು ಎಂಬ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಶುಕ್ರವಾರ ಗೂಗಲ್ ಗೆ ಇ ಮೇಲ್ ಮಾಡಿದ್ದರು. ಇಂಟರ್ನೆಟ್ ಪ್ರೋಟೊಕಾಲ್ ಪ್ರಕಾರ ಟೂಲ್ ಕಿಟ್ ಗೆ ಯಾವ ಪ್ರದೇಶದಿಂದ ರಚಿಸಿ, ದಾಖಲೆ ಅಪ್ ಲೋಡ್ ಮಾಡಲಾಗಿದೆ ಎಂಬ ಬಗ್ಗೆ ಐಪಿ ವಿಳಾಸ ನೀಡುವಂತೆ ದೆಹಲಿ ಪೊಲೀಸರು ಕೇಳಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ಧಾಲಿವಾಲ್ ಸಂಚು ಬಯಲಾಗಿರುವುದಾಗಿ ವರದಿ ತಿಳಿಸಿದೆ.