ದೇವಳದಲ್ಲಿ ಪೂಜಿಸುವ ಹಕ್ಕೆಂದರೆ ಅಪವಿತ್ರಗೊಳಿಸುವ ಹಕ್ಕಲ್ಲ: ಇರಾನಿ
Team Udayavani, Oct 23, 2018, 7:24 PM IST
ಮುಂಬಯಿ : ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋವರ್ಗದ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಪ್ರವೇಶಾವಕಾಶ ನೀಡಿರುವುದಕ್ಕೆ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸಚಿವ ಸ್ಮ್ರತಿ ಇರಾನಿ ಅವರು “ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕೆಂದರೆ ದೇವಸ್ಥಾನವನ್ನು ಅಪವಿತ್ರಗೊಳಿಸುವ ಹಕ್ಕೆಂದು ತಿಳಿಯುವಂತಿಲ್ಲ” ಎಂದು ಹೇಳಿದ್ದಾರೆ.
”ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಲು ನಾನು ಯಾರೂ ಅಲ್ಲ; ಮೇಲಾಗಿ ನಾನು ಕೇಂದ್ರ ಸರಕಾರದಲ್ಲಿ ಸಚಿವೆಯಾಗಿರುವುದರಿಂದ ಕೂಡ ನಾನು ಮಾತನಾಡುವಂತಿಲ್ಲ. ಆದರೂ ನಾನೊಂದು ಪ್ರಶ್ನೆ ಕೇಳುತ್ತೇನೆ : ತಿಂಗಳ ಮುಟ್ಟಿನ ರಕ್ತದಲ್ಲಿ ತೊಯ್ದ ಪ್ಯಾಡನ್ನು ನೀವು ನಿಮ್ಮ ಸ್ನೇಹಿತರ ಮನೆಗೆ ಒಯ್ಯುವಿರಾ ? ಹಾಗೆಯೇ ದೇವಸ್ಥಾನವನ್ನೂ ಪ್ರವೇಶಿಸುವಿರಾ ? ಇಲ್ಲ….”
”…ಹಾಗೆಯೇ ದೇವರ ಮನೆಯನ್ನು ಪ್ರವೇಶಿಸುವ ಹಕ್ಕಿನಲ್ಲಿ ಅದನ್ನು ಅಪವಿತ್ರ ಗೊಳಿಸುವ ಹಕ್ಕು ಇರುವುದಿಲ್ಲ. ಈ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕು; ನನಗೆ ದೇವಸ್ಥಾನದಲ್ಲಿ ಪೂಜಿಸುವ ಹಕ್ಕಿದೆ; ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇರುವುದಿಲ್ಲ. ಈ ವ್ಯತ್ಯಾಸವನ್ನು ನಾವು ಅರಿತುಕೊಂಡು ದೇವಸ್ಥಾನದ ಪಾವಿತ್ರ್ಯವನ್ನು ಗೌರವಿಸಬೇಕು” ಎಂದು ಸ್ಮ್ರತಿ ಇರಾನಿ ಹೇಳಿದರು.
”ನಾನೋರ್ವ ಹಿಂದು; ಆದರೆ ಮದುವೆಯಾದದ್ದು ಝೊರಾಸ್ಟ್ರಿಯನ್ ನನ್ನು. ಹಾಗಾಗಿ ನನಗೆ ಅಗ್ನಿ ದೇವಳಕ್ಕೆ ನನಗೆ ಪ್ರವೇಶ ಇರಲಿಲ್ಲ; ನಾನು ಕುಟುಂಬ ಸಹಿತ ಅಲ್ಲಿಗೆ ಹೋಗಿದ್ದಾಗ ಮಕ್ಕಳನ್ನು ಗಂಡನ ಕೈಗೆ ಒಪ್ಪಿಸಿ, ನಾನು ಮಾತ್ರವೇ ದೇವಳದ ಹೊರಗೆ ಕಾರಿನಲ್ಲಿ ಕುಳಿತಿರಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದು ಸ್ಮ್ರತಿ ಇರಾನಿ ಹೇಳಿದರು.