ರೋಹಿತ್ ವೇಮುಲಾ ದಲಿತನಲ್ಲ
Team Udayavani, Aug 17, 2017, 8:45 AM IST
ಹೊಸದಿಲ್ಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ತನಿಖೆಗಾಗಿ ನೇಮಕ ಮಾಡಲಾಗಿದ್ದ ಏಕ ಸದಸ್ಯ ಸಮಿತಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಆಗಿನ ಮಾನವ ಅಭಿವೃದ್ಧಿ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಅವರಾಗಲಿ, ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರಾಗಲಿ ಕಾರಣರಲ್ಲ ಎಂದಿದೆ. ಅಲ್ಲದೆ ರೋಹಿತ್ ವೇಮುಲಾ ದಲಿತನೂ ಅಲ್ಲ ಎಂದು ಹೇಳಿದೆ.
ಈ ವರದಿ 2016ರ ಅಕ್ಟೋಬರ್ನಲ್ಲೇ ಸೋರಿಕೆಯಾಗಿತ್ತು. ಅಲ್ಲದೆ ಜನವರಿಯಲ್ಲಿ ಇದು ಸರಕಾರದ ಬಳಿಗೆ ಹೋಗಿದ್ದರೂ, ಆರ್ಟಿಐ ಮೂಲಕ ಕೇಳಿದ್ದರೂ ಸರಕಾರ ಕೊಟ್ಟಿರಲಿಲ್ಲ. ಇದೀಗ ಮಂಗಳವಾರ ಈ ವರದಿಯನ್ನು ಬಿಡುಗಡೆ ಮಾಡಿದೆ. ರೋಹಿತ್ ವೇಮುಲಾ ಖಾಸಗಿ ಕಾರಣಗಳಿಗೆ ಹಾಗೂ ಜಗತ್ತಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್ನೋಟ್ನಲ್ಲೂ ಕೇಂದ್ರ ಸಚಿವರ ಬಗ್ಗೆ ಪ್ರಸ್ತಾಪವಿಲ್ಲ ಎಂದು ಈ ವರದಿ ಹೇಳಿದೆ.
ಈ ಮಧ್ಯೆ ವರದಿಯನ್ನು ಪ್ರತಿಪಕ್ಷಗಳು ಮತ್ತು ಹೋರಾಟಗಾರರು ತಿರಸ್ಕರಿಸಿದ್ದಾರೆ. ಇಡೀ ವರದಿಯನ್ನು ಸರಕಾರದ ಮುಂದೆಯೇ ಕುಳಿತು ಬರೆದ ಹಾಗಿದೆ ಎಂದು ದಲಿತ ನಾಯಕರು ಆರೋಪಿಸಿದ್ದಾರೆ. ಇನ್ನು ಮುಂದೆ ಈ ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಹಾಲಿ ನ್ಯಾಯಮೂರ್ತಿಯೊಬ್ಬರು ಈ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.