ವಾಯುಪಡೆ, ಮೋದಿ ಸರಕಾರಕ್ಕೆ ಆರೆಸ್ಸೆಸ್ ಮೆಚ್ಚುಗೆ
Team Udayavani, Mar 9, 2019, 12:30 AM IST
ಗ್ವಾಲಿಯರ್: ಪಾಕಿಸ್ಥಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ವಾಯುಪಡೆ ಮತ್ತು ನರೇಂದ್ರ ಮೋದಿ ಸರಕಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಗಳಿದೆ. ಈ ಸಂಬಂಧ ಗ್ವಾಲಿಯರ್ನಲ್ಲಿ ನಡೆಯುತ್ತಿರುವ ಅಖೀಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿಲುವಳಿ ಕೈಗೊಳ್ಳಲಾಗಿದೆ. ಪಾಕಿಸ್ಥಾನದಲ್ಲಿ ಸಿಕ್ಕಿಬಿದ್ದು, ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ಗೆ ಗೌರವಾರ್ಥವಾಗಿ ಈ ನಿಲುವಳಿಗೆ ಅಭಿನಂದನ ಪ್ರಸ್ತಾವ ಎಂದು ಹೆಸರಿಸಲಾಗಿದೆ. ದೇಶವಿರೋಧಿ ಶಕ್ತಿಗಳ ವಿರುದ್ಧ ಶ್ರಮಿಸಲು ಸರಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಭಾರತೀಯರು ಇಂಥ ಶಕ್ತಿಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು ಎಂದು ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ ವೈದ್ಯ ಹೇಳಿದ್ದಾರೆ.
ಹುತಾತ್ಮರಾದ ಯೋಧರಿಗೆ ಸಂತಾಪವನ್ನೂ ಈ ಸಭೆಯಲ್ಲಿ ಸೂಚಿಸಲಾಗಿದ್ದು, ಭಾರತದ ಸಹಿಷ್ಣುತೆಯನ್ನು ಬಲಹೀನತೆ ಎಂದು ಪರಿಗಣಿಸಬಾರದು ಎಂದು ವೈದ್ಯ ಹೇಳಿದ್ದಾರೆ. ಪ್ರತಿನಿಧಿ ಸಭೆಯಲ್ಲಿ ಸುಮಾರು 1400 ಸದಸ್ಯರು ಭಾಗವಹಿಸಿದ್ದಾರೆ. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.