ರಾಜೀನಾಮೆ ನೀಡಿದ ಸಜ್ಜನ್ ಕುಮಾರ್
Team Udayavani, Dec 19, 2018, 10:26 AM IST
ಹೊಸದಿಲ್ಲಿ: ಸಿಕ್ಖ್ ವಿರೋಧಿ ದಂಗೆಯಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. “ತತ್ಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಿಲ್ಲಿ ಹೈಕೋರ್ಟ್ ನನ್ನ ವಿರುದ್ಧ ತೀರ್ಪು ನೀಡಿದ್ದರಿಂದ ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತೀರ್ಪಿನಿಂದ ಪಕ್ಷಕ್ಕೆ ಮುಜುಗುರ ಉಂಟಾಗುವುದು ಬೇಡ ಎಂಬ ನಿಟ್ಟಿನಲ್ಲಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಟ್ವಿಟರ್ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ಖಾತೆ ಹೊಂದಿಲ್ಲ. ಹೀಗಾಗಿ ಅಲ್ಲಿ ಅವರು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ರಾಹುಲ್ ಹಾರಿಕೆ ಉತ್ತರ: 1984ರ ಸಿಕ್ಖ್ ವಿರೋಧಿ ದಂಗೆ ಸಂಬಂಧ ಕಾಂಗ್ರೆಸ್ ನಾಯಕ ಸಜ್ಜನ್ಕುಮಾರ್ಗೆ ಶಿಕ್ಷೆಯಾದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ಜಾರಿಕೊಂಡರು. ಆದರೆ, ಆಗಿನ ಹಿಂಸಾಚಾರದ ಬಗ್ಗೆ ನಾನು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದಷ್ಟೇ ಹೇಳಿದರು.