ಕೃಷ್ಣ ಮೃಗ ಬೇಟೆಯಾಡಿದ ಸಲ್ಮಾನ್ ಖಾನ್ಗೆ 5 ವರ್ಷ ಜೈಲು!
Team Udayavani, Apr 5, 2018, 11:48 AM IST
ಜೋಧ್ಪುರ್: 20 ವರ್ಷಗಳ ಹಿಂದಿನ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್ ದಿಗ್ಗಜ ನಟ ಸಲ್ಮಾನ್ ಖಾನ್ ದೋಷಿ ಎಂದು ಗುರುವಾರ ಜೋಧ್ಪುರ್ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿ 5 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ಇತರ ಆರೋಪಿಗಳಾದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೆಂದ್ರೆ ಮತ್ತು ನೀಲಂ ಕೋಠಾರಿ ಅವರನ್ನು ಖುಲಾಸೆಗೊಳಿಸಿದೆ.
ಮೊದಲು ಮಾಧ್ಯಮಗಳಲ್ಲಿ 2 ವರ್ಷದ ಜೈಲು ಶಿಕ್ಷೆ ಎಂದು ಪ್ರಕಟವಾಗಿತ್ತು. ಆದರೆ ಶಿಕ್ಷೆ ಮಧ್ಯಾಹ್ನವೇ ಪ್ರಕಟವಾಗಿದ್ದು 5 ವರ್ಷದ್ದು ಎಂದು ಖಚಿತವಾಗಿದೆ.
5 ವರ್ಷದ ಶಿಕ್ಷೆಯಾಗಿರುವ ಕಾರಣ ಸಲ್ಮಾನ್ಗೆ ಇಂದು ಜಾಮೀನು ಸಿಗುವ ಸಾಧ್ಯತೆಗಳಿಲ್ಲದೆ ಇರುವ ಕಾರಣ ಒಂದು ರಾತ್ರಿ ಜೈಲು ವಾಸ ಅನುಭವಿಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ.
ಜೋಧ್ಪುರ ಸೆಂಟ್ರಲ್ ಜೈಲಿಗೆ ಸಲ್ಮಾನ್ ಖಾನ್ ನನ್ನು ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.
ಸಲ್ಮಾನ್ ಖಾನ್ ಪರ ವಕೀಲರು ಜಾಮೀನಿಗಾಗಿ ಜೋಧ್ಪುರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ನಾಳೆ ಬೆಳಗ್ಗೆ 10.30 ಕ್ಕೆ ವಿಚಾರಣೆಗೆ ಬರಲಿದೆ.
ವಕೀಲರು ತೀರ್ಪು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಮೃಗಗಳೆರಡರ ಹತ್ಯೆ ಪ್ರಕರಣದಲ್ಲಿ ವನ್ಯ ಜೀವಿ ಕಾಯಿದೆ ಸೆಕ್ಷನ್ 51 ರ ಪ್ರಕಾರ ಸಲ್ಮಾನ್ ದೋಷಿ ಎಂದು ನ್ಯಾಯಾಧೀಶರು ತೀರ್ಪು ನೀಡಿ, 10 ಸಾವಿರ ರೂಪಾಯಿ ದಂಡ ತೆರಲು ಆದೇಶಿಸಿದ್ದಾರೆ.
1998 ರ ಆಕ್ಟೋಬರ್ 2 ರಂದು ಜೋಧ್ಪುರ್ ಹೊರವಲಯದಲ್ಲಿ ಕಂಕಣಿ ಎಂಬಲ್ಲಿ 2 ಕೃಷ್ಣ ಮೃಗಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಈ ಕೃತ್ಯ ಎಸಗಿದ್ದರು.