ಸಲ್ಮಾನ್ಗೆ ಜಾಮೀನು
Team Udayavani, Apr 8, 2018, 6:00 AM IST
ಜೋಧಪುರ: ಕೃಷ್ಣ ಮೃಗಗಳ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ಇಲ್ಲಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜತೆಗೆ 50 ಸಾವಿರ ರೂ.ಗಳ ಬಾಂಡ್ ಹಾಗೂ ಅಷ್ಟೇ ಮೊತ್ತದ ಎರಡು ಖಾತ್ರಿ ನೀಡುವಂತೆ ಕೋರ್ಟ್ ಸೂಚಿಸಿದೆ.
ಶನಿವಾರ ಸಂಜೆ ಸಲ್ಮಾನ್ ಜೋಧಪುರ ಜೈಲಿನಿಂದ ಬಿಡುಗಡೆಯಾಗಿ ರಾತ್ರಿ ವೇಳೆಗೆ ಮುಂಬಯಿ ತಲುಪಿದ್ದಾರೆ. 1998ರಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಗುರುವಾರ ಜೋಧಪುರ ಕೋರ್ಟ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಹಾಗಾಗಿ ಗುರುವಾರ ಸಂಜೆ ಸಲ್ಮಾನ್ ಅವರನ್ನು ಜೋಧಪುರ ಜಿಲ್ಲಾ ಕಾರಾಗೃಹಕ್ಕೆ ರವಾ ನಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಸೆಷನ್ಸ್ ಕೋರ್ಟಿನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತಾದರೂ ವಿಚಾರಣೆ ಶನಿವಾರಕ್ಕೆ ಮುಂದೂಡಲ್ಪಟ್ಟಿತ್ತು.