ಪುಲ್ವಾಮಾ ಎನ್ಕೌಂಟರ್ : ಒಬ್ಬ ಉಗ್ರನ ಹತ್ಯೆ
ಕಾಶ್ಮೀರದಲ್ಲಿ ಇದುವರೆಗೆ 100ಕ್ಕೂ ಹೆಚ್ಚು ಉಗ್ರರ ಹತ್ಯೆ ; ಭಾರತದಿಂದ 4 ನಾಗರಿಕರ ಹತ್ಯೆ: ಪಾಕಿಸ್ಥಾನ ಆರೋಪ
Team Udayavani, Jun 19, 2020, 6:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಶ್ರೀನಗರ/ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಪುಲ್ವಾಮಾದ ಪಂಪೋರಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದ ವೇಳೆ ಗುಂಡಿನ ಚಕಮಕಿ ಆರಂಭವಾಗಿದ್ದು, ಒಬ್ಬ ಉಗ್ರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಯಿತು. ಮಂಗಳವಾರವಷ್ಟೇ ಮೂವರು ಉಗ್ರರನ್ನು ಶೋಪಿಯಾನ್ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿತ್ತು.
ಪ್ರಸಕ್ತ ವರ್ಷ ವಿವಿಧ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾಪಡೆ ಹತ್ಯೆಗೈದಿದೆ.
ಪಾಕ್ ಆರೋಪ: ಗಡಿಯಲ್ಲಿ ಸತತ ಕದನ ವಿರಾಮ ಉಲ್ಲಂಘನೆ ಮಾಡುತ್ತಾ ಬಂದಿರುವ ಪಾಕಿಸ್ತಾನವು ಈಗ ಭಾರತದ ಮೇಲೆಯೇ ಗೂಬೆ ಕೂರಿಸಿದ್ದು, ಭಾರತದ ಸೇನೆಯ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿರುವುದಾಗಿ ಆರೋಪಿಸಿದೆ.
ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕಿಸ್ಥಾನದ ಗಡಿ ಗ್ರಾಮಗಳಾದ ನಿಕಿಯಾಲ್ ಮತ್ತು ಬಾಗ್ಸರ್ ವಲಯವನ್ನು ಗುರಿಯಾಗಿಸಿಕೊಂಡು ಭಾರತದ ಸೇನೆ ದಾಳಿ ನಡೆಸಿದ್ದು, ಒಬ್ಬ ಮಹಿಳೆ ಸೇರಿದಂತೆ ನಾಲ್ವರು ನಾಗರಿಕರು ಅಸುನೀಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪಾಕ್ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಆರೋಪಿಸಿದ್ದಾರೆ. ಭಾರತವೇ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿದೆ ಎಂದೂ ಅವರು ಹೇಳಿದ್ದಾರೆ.