ಹಳಿ ತಪ್ಪಿದ ಸೀಮಾಂಚಲ ಎಕ್ಸ್ಪ್ರೆಸ್ ರೈಲು: 6 ಸಾವು
Team Udayavani, Feb 4, 2019, 12:30 AM IST
ಸೋನ್ಪುರ: ಬಿಹಾರದ ವೈಶಾಲಿ ಜಿಲ್ಲೆಯ ಸೋನ್ಪುರದಲ್ಲಿ ಭಾನುವಾರ ಮುಂಜಾನೆ, ದೆಹಲಿ ಕಡೆಗೆ ಹೊರಟಿದ್ದ ಜೋಗ್ಬಾನಿ-ಆನಂದ ವಿಹಾರ್ ಸೀಮಾಂಚಲ ಎಕ್ಸ್ಪ್ರೆಸ್ ರೈಲಿನ 11 ಬೋಗಿಗಳು ಹಳಿ ತಪ್ಪಿದ ಪರಿಣಾಮ, ಅದರಲ್ಲಿದ್ದ ಪ್ರಯಾಣಿಕರಲ್ಲಿ 6 ಜನರು ಮೃತಪಟ್ಟು, 29 ಮಂದಿ ಗಾಯಗೊಂಡಿದ್ದಾರೆ. ರೈಲು ಹಳಿಯಲ್ಲಿದ್ದ ಬಿರುಕು ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಗಂಜ್ ಜಿಲ್ಲೆಯ ಜೋಗ್ಬಾನಿ ನಿಲ್ದಾಣದಿಂದ ಹೊರಟಿದ್ದ ಈ ರೈಲು, ಬೆಳಗ್ಗೆ 4 ಗಂಟೆ ಸುಮಾರಿಗೆ ಹಾಜೀಂಪುರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಸಾಹದೇಯ್ ಬುಜುರ್ಗ್ ಬಳಿಗೆ ಬಂದಾಗ ಒಂದು ಎ.ಸಿ. ಬೋಗಿ ಬಿ 3, ಒಂದು ಜನರಲ್ ಬೋಗಿ, ಮೂರು ಸ್ಲಿàಪರ್ ಕೋಚ್ಗಳು ಮತ್ತು ಆರು ಇತರ ಬೋಗಿಗಳು ಹಳಿ ತಪ್ಪಿದವು.
ಪರಿಹಾರ: ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಹಾಗೂ ಅಲ್ಪ ಗಾಯಗಳಾದವರಿಗೆ ತಲಾ 50 ಸಾವಿರ ರೂ.ಗಳ ಪರಿಹಾರವನ್ನು ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಘೋಷಿಸಿದ್ದಾರೆ.
ಗಣ್ಯರಿಂದ ಸಂತಾಪ: ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಈ ದುರಂತದ ಕುರಿತು ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.