ಶಿರೋಮಣಿ ಅಕಾಲಿ ದಳ ಹಿರಿಯ ನಾಯಕ ಜಿತೇದಾರ್ ತೋಟಾ ಸಿಂಗ್ ನಿಧನ
Team Udayavani, May 21, 2022, 6:37 PM IST
ಪಂಜಾಬ್: ಶಿರೋಮಣಿ ಅಕಾಲಿ ದಳ (ಎಸ್ಡಿಎ)ನಾಯಕ ಮತ್ತು ಪಂಜಾಬ್ ಮಾಜಿ ಸಚಿವ ಜಿತೇದಾರ್ ತೋಟಾ ಸಿಂಗ್ (81) ಅವರು ಶನಿವಾರ(ಮೇ21)ರಂದು ಕೊನೆಯುಸಿರೆಳೆದಿದ್ದಾರೆ.
ಬಹುದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೋಟಾ ಸಿಂಗ್ ಅವರು ಅಕಾಲಿ ಸರ್ಕಾರದಲ್ಲಿ ಕೃಷಿ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶಿರೋಮಣಿ ಅಕಾಲಿ ದಳದ ಹಿರಿಯ ಉಪಾಧ್ಯಕ್ಷರಾಗಿದ್ದರು ಮತ್ತು ಕೋರ್ ಕಮಿಟಿಯ ಸದಸ್ಯರಾಗಿದ್ದರು ಮಾತ್ರವಲ್ಲದೇ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಸಿಂಗ್ 1997ರಲ್ಲಿ ಮೋಗಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು ಅವರು ಆ ಸಮಯದಲ್ಲಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಸೇರ್ಪಡೆಗೊಂಡರು.
2002ರ ಚುನಾವಣೆಯಲ್ಲಿ ಮೋಗಾದಿಂದ ಮರು ಆಯ್ಕೆಯಾದರು.ಅದರೆ ಅವರು 2007ರಲ್ಲಿ ಸೋತರು. ಮತ್ತೊಮ್ಮೆ 2012ರಲ್ಲಿ ಧರ್ಮಕೋಟ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಕೃಷಿ ಸಚಿವರಾದರು.
ತೋಟಾ ಸಿಂಗ್ ಅವರು 2017 ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
ಗಣ್ಯರ ಸಂತಾಪ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ,ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ , ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್,ಅಕಾಲಿ ದಳದ ನಾಯಕ ದಲ್ಜಿತ್ ಸಿಂಗ್ ಚೀಮಾ ಹಾಗೂ ಇನ್ನಿತರ ಅನೇಕ ಗಣ್ಯರು ಸಹ ತೋಟಾ ಸಿಂಗ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ತೋಟಾ ಸಿಂಗ್ ಅವರ ಅಂತ್ಯಕ್ರಿಯೆ ಮೇ 24ರಂದು ಅವರ ಹುಟ್ಟೂರಾದ ಮೋಗಾದಲ್ಲಿ ನಡೆಯಲಿದೆ.