ಅಕ್ರಮ ಮರಳುಗಾರಿಕೆ ಕಡಿವಾಣಕ್ಕೆ ಪ್ರತ್ಯೇಕ ದಳ
Team Udayavani, Dec 19, 2021, 11:00 PM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಕರ್ನಾಟಕದಲ್ಲಿನ ಅಕ್ರಮ ಮರಳುಗಾರಿಕೆ ದಂಧೆಗೆ ನಿಯಂತ್ರಣ ಹೇರುವ ಸಂಬಂಧ ಪ್ರತ್ಯೇಕ ರಕ್ಷಣಾ ಪಡೆಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ, ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಹೇಳಿದೆ.
ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಅಕ್ರಮ ಮರಳುಗಾರಿಕೆ ಸಂಬಂಧ ಎನ್ಜಿಟಿಯ ದಕ್ಷಿಣ ಭಾರತ ವಿಭಾಗ ವಿಚಾರಣೆ ನಡೆಸುತ್ತಿದೆ.
ಈ ಸಂಬಂಧ ಎನ್ಜಿಟಿಗೆ ಅಫಿಡವಿಟ್ ಸಲ್ಲಿಸಿರುವ ಅರಣ್ಯ ಮತ್ತು ಭೂಗರ್ಭಶಾಸ್ತ್ರ ಇಲಾಖೆ, ಅಕ್ರಮ ಮರಳುಗಾರಿಕೆ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದೆ. ಅಲ್ಲದೆ, ಸರ್ಕಾರ ಪೊಲೀಸರು, ಕಂದಾಯ, ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆಗೆ ಸಂಪೂರ್ಣ ಪವರ್ ಕೊಟ್ಟಿದೆ.
ಈ ಇಲಾಖೆಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಇದನ್ನೂ ಓದಿ:ಸುರಕ್ಷತೆ ನಿಯಮ ಪಾಲಿಸದ 100 ಶಾಲಾ ಕಟ್ಟಡ ಕೆಡವಲು ಆದೇಶ
ಅಷ್ಟೇ ಅಲ್ಲ, ಅಕ್ರಮ ಮರಳುಗಾರಿಕೆ ತಡೆಯುವ ಸಲುವಾಗಿ ಕೆರೆಗಳು, ಗುಂಡಿಗಳು, ನದಿಗಳಿಗೆ ಸಂಪರ್ಕಿಸುವ ಹಳ್ಳಿಗಳ ಅಕ್ರಮ ರಸ್ತೆಗಳನ್ನು ಬ್ಲ್ಯಾಕ್ ಮಾಡಲಾಗಿದೆ.
ಅಲ್ಲದೆ, ಮರಳು ಗಣಿಗಾರಿಕೆಗಾಗಿ ಸರ್ಕಾರವೇ ಬ್ಲ್ಯಾಕ್ಗಳನ್ನು ವೈಜ್ಞಾನಿಕವಾಗಿ ಗುರುತಿಸಿದೆ ಮತ್ತು ಇವುಗಳನ್ನು ಹರಾಜು ಹಾಕುತ್ತಿದೆ ಎಂಬ ಮಾಹಿತಿಯನ್ನೂ ನೀಡಿದೆ.