36 ವರ್ಷ ದಿಟ್ಟ ಹೋರಾಟ: ಛತ್ರಪತಿ ಶಿವಾಜಿಗೂ ಕರ್ನಾಟಕಕ್ಕೂ ನಿಕಟ ನಂಟು
ಅಂದಿನಿಂದ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಫೆ.19 ಅಧಿಕೃತವಾಗಿ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ.
Team Udayavani, Feb 19, 2020, 12:55 PM IST
ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮಜಯಂತಿ. ಶಿವಾಜಿ 1630ರ ಫೆಬ್ರವರಿ 19ರಂದು ಜನಿಸಿದ್ದರು, ಈ ದಿನವನ್ನು ಮಹಾರಾಷ್ಟ್ರದಲ್ಲಿ ಶಿವ ಜಯಂತಿ ಎಂದು ಆಚರಿಸಲಾಗುತ್ತಿದೆ. ಈ ಹಿಂದೆ ಶಿವಾಜಿ ಜನ್ಮ ದಿನಾಂಕ ನಿಖರವಾಗಿ ಗೊತ್ತಿಲ್ಲದ್ದರಿಂದ ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ಶಿವ ಜಯಂತಿ ಆಚರಿಸಲಾಗುತ್ತಿತ್ತು.
ಬಾಬಾ ಸಾಹೇಬ ಪುರಂದರೆಯವರ ಅಧ್ಯಕ್ಷತೆಯ ಸಮಿತಿ ನೀಡಿದ ಸಂಶೋಧನಾ ವರದಿಯ ನಂತರ ಶಿವಾಜಿ ಮಹಾರಾಜರು 1627ನೇ ಇಸವಿಯಲ್ಲಿ ಹುಟ್ಟಿದ ವರ್ಷವನ್ನು ಸಮಿತಿ ಹೊಡೆದು ಹಾಕಿ 1630 ಫೆ.19ರಂದು ಹುಟ್ಟಿದರೆಂದು ದಾಖಲೆ ಸಹಿತವಾಗಿ ನೀಡಿತ್ತು. ಅಂದಿನಿಂದ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಫೆ.19 ಅಧಿಕೃತವಾಗಿ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ.
ಶಿವಾಜಿ ಮತ್ತು ಕರ್ನಾಟಕದ ನಂಟು:
ಶಿವಾಜಿ ಮಹಾರಾಷ್ಟ್ರದ ಕುಲದೈವವಾಗಿದ್ದರೂ ಅವರ ಮೂಲ ಬೇರುಗಳು ಕರ್ನಾಟಕದಲ್ಲಿದೆ. ಅವರ ಜೀವನ ಚರಿತ್ರೆಗೆ ಸಂಬಂಧಪಟ್ಟ ಅನೇಕ ವಿಷಯಗಳು, ಘಟನೆಗಳು ಕರ್ನಾಟಕಕ್ಕೆ ಸಂಬಂಧಪಟ್ಟಿವೆ. ಛತ್ರಪತಿ ಶಿವಾಜಿ ಮಹಾರಾಜರ ಪೂರ್ವಜರು ಕರ್ನಾಟಕದ ಗದಗ ಜಿಲ್ಲೆಯ ಸೊರಟೂರಿನಿಂದ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು ಮತ್ತು ಅವರೆಲ್ಲರೂ ಕನ್ನಡಿಗರಾಗಿದ್ದರೆಂಬುದು ಇತ್ತೀಚೆಗೆ ಕಂಡುಬಂದ ಸಂಶೋಧನೆಯಾಗಿದೆ.
ಮೊಘಲ್ ಅರಸರ ಕಾಲದಲ್ಲಿ ಹಾಗೂ ಶಿವಾಜಿ ಮಹಾರಾಜರ ಕಾಲದಲ್ಲಿ ಇತಿಹಾಸವನ್ನು ಆಗಿಂದಾಗಲೇ ದಾಖಲಿಸುವ ಪದ್ಧತಿ ಇತ್ತು. ಇತಿಹಾಸವನ್ನು ಈ ರೀತಿಯಾಗಿ ದಾಖಲಿಸುವ ಕ್ರಮಕ್ಕೆ ಬಖರ್, ಸಭಾಸದ, ರಿಯಾಸತ್ ಎಂದು ಕರೆಯಲಾಗುತ್ತಿತ್ತು.
ಶಿವಾಜಿ ಮಹಾರಾಜರು ಬದುಕಿದ್ದು ಕೇವಲ 50ವರ್ಷ ಮಾತ್ರ (ನಿಧನ 1680ರ ಏಪ್ರಿಲ್ 3) ಇತಿಹಾಸಕಾರರ ಹೇಳಿಕೆಯಂತೆ ಶಿವಾಜಿ ತಮ್ಮ 14ನೇ ವಯಸ್ಸಿಗೆ ರಣರಂಗಕ್ಕೆ ಧುಮುಕಿದ್ದರು. ಅಂದರೆ 36 ವರ್ಷ ಅಖಂಡವಾಗಿ ಅವರು ರಣರಂಗದಲ್ಲಿ ಶತ್ರುವಿನ ಜೊತೆಗೆ ಯುದ್ಧ ನಿರತರಾಗಿದ್ದರು. ಇಷ್ಟು ಸಣ್ಣ ಅವಧಿಯಲ್ಲಿ ಅವರು ಉತ್ತರದ ದೆಹಲಿಯಿಂದ ದಕ್ಷಿಣದ ತಂಜಾವೂರು ತಿರುಚಿನಾಪಳ್ಳಿಯವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಅವರು ಗೆದ್ದ ಕೋಟೆಗಳ ಸಂಖ್ಯೆ 3,661. ಆ ಕಾಲದಲ್ಲಿ ಒಂದೊಂದು ಕೋಟೆಯೂ ಒಂದೊಂದು ರಾಜ್ಯವೆಂದು ಪರಿಗಣಿಸಲ್ಪಡುತ್ತಿತ್ತು. ಜಾಗತಿಕವಾಗಿ ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ರಾಜ್ಯಗಳನ್ನು ಗೆದ್ದ ಏಕೈಕ ವೀರ ಶಿವಾಜಿ ಎಂದು ಇತಿಹಾಸ ದಾಖಲಿಸಿದೆ.
ಲೇಖನ ಕೃಪೆ:ತರಂಗದಿಂದ ಆಯ್ದ ಭಾಗ
ಡಾ.ಸರಜೂ ಕಾಟ್ಕರ್