ಸಿಕ್ಖ್ ನರಮೇಧ: ಯಶ್ಪಾಲ್ಗೆ ಗಲ್ಲು
Team Udayavani, Nov 21, 2018, 10:42 AM IST
ಹೊಸದಿಲ್ಲಿ: 1984ರ ಸಿಖ್ ನರಮೇಧ ಪ್ರಕರಣದ ಆರೋಪಿಗಳಾದ ಯಶ್ಪಾಲ್ ಸಿಂಗ್, ನರೇಶ್ ಶೆರಾವತ್ ಅವರನ್ನು ದೋಷಿಗಳೆಂದು ಇತ್ತೀಚೆಗಷ್ಟೇ ಘೋಷಿಸಿದ್ದ ದಿಲ್ಲಿಯ ಸ್ಥಳೀಯ ನ್ಯಾಯಾಲಯ, ಮಂಗಳವಾರ ಯಶ್ಪಾಲ್ಗೆ ಮರಣ ದಂಡನೆ ಮತ್ತು ನರೇಶ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಜತೆಗೆ, ಇಬ್ಬರಿಗೂ ತಲಾ 35 ಲಕ್ಷ ರೂ. ದಂಡ ವಿಧಿಸಲಾಗಿದೆ.
ಭದ್ರತೆ ಸಮಸ್ಯೆ ಹಿನ್ನೆಲೆಯಲ್ಲಿ, ಆರೋಪಿಗಳು ಬಂಧನದಲ್ಲಿರುವ ತಿಹಾರ್ ಜೈಲಿನಲ್ಲೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಜಯ್ ಪಾಂಡೆ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ರಾಜಕೀಯವಾಗಿ ಮಹತ್ವ ಪಡೆದಿರುವ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗುತ್ತಿರುವ ಮೊದಲ ಆಪಾದಿತರು ಇವರು.
1984ರ ನ.1ರಂದು ಸಿಖ್ ವಿರೋಧಿ ದಂಗೆ ಭುಗಿಲೆದ್ದ ಸಂದರ್ಭದಲ್ಲಿ ದಕ್ಷಿಣ ದೆಹಲಿಯಲ್ಲಿ ಹರ್ದೇವ್ ಸಿಂಗ್ ಹಾಗೂ ಅವಾ¤ರ್ ಸಿಂಗ್ ಎಂಬ ಇಬ್ಬರು ಸಿಕ್ಖರು ಹತ್ಯೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿತ್ತು. ಸಾಕ್ಷಾಧಾರಗಳ ಕೊರತೆಯಿಂದಾಗಿ ಸಿಕ್ಖ್ ನರಮೇಧದ ಪ್ರಕರಣಗಳನ್ನು ದಿಲ್ಲಿ ಪೊಲೀಸರು ಕೈಬಿಟ್ಟಿದ್ದರು. ಆದರೆ, 2015ರಲ್ಲಿ ಕೇಂದ್ರ ಗೃಹ ಸಚಿವಾಲಯ, ವಿಶೇಷ ತನಿಖಾ ದಳದ (ಎಸ್ಐಟಿ) ಮೂಲಕ ಈ ಪ್ರಕರಣದ ಪುನರ್ ತನಿಖೆ ನಡೆಸುವಂತೆ ಆದೇಶಿಸಿತ್ತು. ತೀರ್ಪನ್ನು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ.