ಪಕ್ಷ ಬಲಪಡಿಸುವತ್ತ ಹೆಜ್ಜೆ
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಎಚ್ಚೆತ್ತ ಪ್ರತಿಪಕ್ಷಗಳು
Team Udayavani, Jun 3, 2019, 6:00 AM IST
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುವ ಕನಸು ಕಂಡು, ಮುಗ್ಗರಿಸಿದ ಎಸ್ಪಿ-ಬಿಎಸ್ಪಿ ಪಕ್ಷಗಳು ಈಗ ಪಕ್ಷದ ಸಂಘಟನಾತ್ಮಕ ಪುನಾರಚನೆಗೆ ಕೈಹಾಕಿವೆ. ಹೀನಾಯ ಸೋಲಿನ ಆಘಾತದ ಬಳಿಕ ತುಟಿಪಿಟಕ್ಕೆನ್ನದೆ ಕುಳಿತಿದ್ದ ಎರಡೂ ಪಕ್ಷಗಳು ಈಗ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದು, ಪಕ್ಷಗಳನ್ನು ಮತ್ತೆ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿವೆ.
ಅದರಂತೆ, ಬಹುಜನ ಸಮಾಜ ಪಕ್ಷದ ಅಧಿನಾಯಕಿ, ಮಾಜಿ ಸಿಎಂ ಮಾಯಾವತಿ ಅವರು ಭಾನುವಾರ 6 ರಾಜ್ಯಗಳಲ್ಲಿ ಬಿಎಸ್ಪಿ ಘಟಕಗಳ ಉಸ್ತುವಾರಿಗಳನ್ನು ತೆಗೆದುಹಾಕಿದ್ದಾರೆ. ಇನ್ನೊಂದು ಕಡೆ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಮತ್ತೆ ಸಕ್ರಿಯರಾಗಿದ್ದು, ಶಿವಪಾಲ್ ಯಾದವ್ ಸೇರಿದಂತೆ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ.
ಉಸ್ತುವಾರಿಗಳು ಬದಲು: ಬಿಎಸ್ಪಿ ನಾಯಕಿ ಮಾಯಾವತಿ ಭಾನುವಾರ ಉತ್ತರಾಖಂಡ, ಬಿಹಾರ, ಜಾರ್ಖಂಡ್, ಒಡಿಶಾ, ಗುಜರಾತ್ ಮತ್ತು ರಾಜಸ್ಥಾನದ ರಾಜ್ಯ ಘಟಕದ ಉಸ್ತುವಾರಿಗಳು ಹಾಗೂ ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಾಧ್ಯಕ್ಷರನ್ನು ಬದಲಿಸಿದ್ದಾರೆ. ದೆಹಲಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಸುರೇಂದ್ರ ಸಿಂಗ್ರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ಲಕ್ಷ್ಮಣ್ ಸಿಂಗ್ರನ್ನು ನೇಮಕ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ರಾಮಕಾಂತ್ ಪುತ್ತಲ್ರನ್ನು ಹಾಗೂ ಉತ್ತರಾಖಂಡದಲ್ಲಿ ಎಂ.ಎಲ್.ತೋಮರ್ರನ್ನು ಹೊಸ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇಂದು ಸಭೆ: ಫಲಿತಾಂಶದ ಬಳಿಕ ದೆಹಲಿಯಲ್ಲೇ ಮೊಕ್ಕಾಂ ಹೂಡಿರುವ ಮಾಯಾವತಿ ಅವರು ಜೂ.3ರಂದು ವಿವಿಧ ರಾಜ್ಯಗಳ ಅಧ್ಯಕ್ಷರು ಹಾಗೂ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ದುರ್ಬಲ ಸಾಧನೆಗೆ ಕಾರಣವೇನು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಗೆ ಉತ್ತರಪ್ರದೇಶದ 40 ಸಮನ್ವಯಕಾರರನ್ನೂ ಆಹ್ವಾನಿಸಲಾಗಿದೆ.
ಅಖಾಡಕ್ಕಿಳಿದ ಮುಲಾಯಂ: ಸುಮಾರು ಎರಡೂವರೆ ವರ್ಷಗಳಿಂದ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತೆ ಸಕ್ರಿಯರಾಗಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪುತ್ರ ಅಖೀಲೇಶ್ ಯಾದವ್ ನಾಯಕತ್ವವು ವಿಫಲವಾದ ಹಿನ್ನೆಲೆಯಲ್ಲಿ ಸ್ವತಃ ಮುಲಾಯಂ ಅವರೇ ಈಗ ಅಖಾಡಕ್ಕೆ ಧುಮುಕಿದ್ದಾರೆ. ಪಕ್ಷದಲ್ಲಿರುವ ಯಾದವೇತರ ನಾಯಕರೊಂದಿಗೆ ಬಾಂಧವ್ಯ ವೃದ್ಧಿಸಿಕೊಂಡು, ಎಸ್ಪಿ ಯಾದವರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚುವಂತೆ ಅಖೀಲೇಶ್ಗೆ ಮುಲಾಯಂ ಸಲಹೆ ನೀಡಿದ್ದಾರೆ. ಅಲ್ಲದೆ, ರಿಯೋತಿ ರಮಣ್ ಸಿಂಗ್, ಭಗವತಿ ಸಿಂಗ್, ಓಂ ಪ್ರಕಾಶ್ ಸಿಂಗ್, ಮನೋಜ್ ಪಾಂಡೆ, ಅರವಿಂದ್ ಸಿಂಗ್ ಮತ್ತಿತರ ಹಿರಿಯ ನಾಯಕರೊಂದಿಗೆ ಸಭೆಯನ್ನೂ ಕರೆಯಲಾಗಿದೆ. ಕಳೆದ 2 ವರ್ಷಗಳಲ್ಲಿ ಪಕ್ಷ ತೊರೆದು ಹೋದ ಎಲ್ಲ ನಾಯಕರನ್ನೂ ವಾಪಸ್ ಕರೆತರುವಂತೆ ಅಖೀಲೇಶ್ಗೆ ಮುಲಾಯಂ ಸೂಚಿಸಿದ್ದಾರೆ.
ಶಿವಪಾಲ್ ಮತ್ತೆ ಎಸ್ಪಿಗೆ?: ಎಸ್ಪಿಯಿಂದ ಹೊರಬಂದು ತಮ್ಮದೇ ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ(ಪಿಎಸ್ಪಿಎಲ್) ವನ್ನು ಸ್ಥಾಪಿಸಿಕೊಂಡಿರುವ ಶಿವಪಾಲ್ ಯಾದವ್ ಅವರೂ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾರಣ, ಮತ್ತೆ ಎಸ್ಪಿ ಕಡೆ ಮುಖ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಪಕ್ಷದ ಹಿರಿಯ ನಾಯಕರೊಬ್ಬರು, ‘ಈ ಚುನಾವಣೆಯು ಅಖೀಲೇಶ್ ಮತ್ತು ಶಿವಪಾಲ್ ಇಬ್ಬರಿಗೂ ಸರಿಯಾದ ಸಂದೇಶ ರವಾನಿಸಿದೆ. ಒಗ್ಗಟ್ಟಾಗಿದ್ದರೆ ಎದ್ದು ನಿಲ್ಲುತ್ತೇವೆ, ವಿಭಜನೆಯಾದರೆ ಇಬ್ಬರೂ ಬೀಳುತ್ತೇವೆ ಎಂಬುದು ಅವರಿಗೆ ಗೊತ್ತಾಗಿದೆ. ಪುತ್ರ ಹಾಗೂ ಸಹೋದರ ಒಂದಾಗಬೇಕು ಮತ್ತು ಪಕ್ಷ ಮತ್ತೆ ಬಲಿಷ್ಠವಾಗಬೇಕು ಎಂಬುದು ಮುಲಾಯಂ ಅವರ ಆಸೆಯೂ ಆಗಿದೆ’ ಎಂದಿದ್ದಾರೆ.
ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ
ಲೋಕಸಭೆ ಚುನಾವಣೆ ಆರಂಭವಾದಾಗ ಶುರುವಾದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಇನ್ನೂ ನಿಂತಿಲ್ಲ. ಭಾನುವಾರ ನಾರ್ತ್ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಚೂರಿ ಇರಿದು ಹತ್ಯೆಗೈಯ್ಯಸಲಾಗಿದೆ. ಇದಕ್ಕೂ ಮುನ್ನ ಅಂದರೆ ಶನಿವಾರ ತಡರಾತ್ರಿ ಗಂಗಾರಾಂಪುರದಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ. ಒಟ್ಟಿನಲ್ಲಿ ಮೇ 23ರಂದು ಫಲಿತಾಂಶ ಹೊರಬಿದ್ದ ನಂತರ ರಾಜ್ಯದಲ್ಲಿ ಒಟ್ಟು 7 ಮಂದಿ ಹತ್ಯೆಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ