ಮ.ಪ್ರ. ಸಿಎಂ ಚೌಹಾಣ್ ಕಾರಿನ ಮೇಲೆ ಕಲ್ಲೆಸೆತ; ಗಾಯಗಳಿಲ್ಲದೆ ಪಾರು
Team Udayavani, Sep 3, 2018, 12:08 PM IST
ಸಿಧಿ, ಮಧ್ಯ ಪ್ರದೇಶ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ರಾಜ್ಯ ಪ್ರವಾಸ ಕೈಗೊಂಡಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಮಧ ಪ್ರದೇಶದ ಸಿಧಿ ಜಿಲ್ಲೆಯ ಸಮೀಪ ಚುರ್ಹಾಟ್ ಎಂಬಲ್ಲಿ ನಡೆದಿದೆ.
ಸಿಎಂ ಚೌಹಾಣ್ ಅವರು ಕಲ್ಲೆಸೆತದಲ್ಲಿ ಗಾಯಗೊಂಡಿಲ್ಲ; ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಚುರ್ಹಾಟ್ ಪೊಲೀಸ್ ಇನ್ಸ್ಪೆಕ್ಟರ್ ರಾಮ್ ಬಾಬು ಚೌಧರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ಸಿಎಂ ಅವರ ಕಾರ್ಯಕ್ರಮಗಳಲ್ಲಿ ತಾನು ವ್ಯಸ್ತನಾಗಿರುವುದಾಗಿ ಹೇಳಿರುವ ಚೌಧರಿ ಅವರು ಕಲ್ಲೆಸೆತದ ಘಟನೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ನೀಡಿಲ್ಲ.
ಚುರ್ಹಾಟ್ ಕ್ಷೇತ್ರವು ರಾಜ್ಯ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಅಜಯ್ ಸಿಂಗ್ ಅವರ ಕ್ಷೇತ್ರವಾಗಿದೆ. ಸಿಎಂ ಚೌಹಾಣ್ ಅವರ ಮೇಲೆ ಇಲ್ಲಿ ಕಲ್ಲೆಸೆಯಲಾಗಿದೆ ಎಂದು ಬಿಜೆಪಿ ವಕ್ತಾರ ರಜನೀಶ್ ಅಗ್ರವಾಲ್ ತಿಳಿಸಿದ್ದಾರೆ. ಸಿಎಂ ವಾಹನದ ಮೇಲೆ ಕಲ್ಲೆಸೆತ ನಡೆದಿರುವ ಚುರ್ಹಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ.
ತಮ್ಮ ಜನ ಆಶೀರ್ವಾದ ಯಾತ್ರೆಯ ಅಂಗವಾಗಿ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಚೌಹಾಣ್ ಅವರು ವಿಪಕ್ಷ ನಾಯಕ ಅಜಯ್ ಸಿಂಗ್ ಅವರಿಗೆ ಸವಾಲು ಹಾಕಿ ತಾಕತ್ತಿದ್ದರೆ ಬಹಿರಂಗವಾಗಿ ನನ್ನೆದುರು ಹೋರಾಡಿ ಎಂದು ಹೇಳಿದರು.