CAA; ಘಟಿಕೋತ್ಸವಕ್ಕೆ ಹಾಜರಾಗಲು ನಿರ್ಬಂಧ…ಚಿನ್ನದ ಪದಕ ನಿರಾಕರಿಸಿದ ವಿದ್ಯಾರ್ಥಿನಿ
ರಾಷ್ಟ್ರಪತಿ ಆಗಮನಕ್ಕೂ ಮುನ್ನ ಆಡಿಟೋರಿಯಂನಿಂದ ಹೊರಹೋಗಲು ಯಾಕೆ ಹೇಳಿದರು ಎಂಬುದು ಗೊತ್ತಾಗಿಲ್ಲ
Team Udayavani, Dec 24, 2019, 1:39 PM IST
ತಮಿಳುನಾಡು: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಮುಖ್ಯ ಅತಿಥಿಯಾಗಿದ್ದ ಪಾಂಡಿಚೇರಿ ಯೂನಿರ್ವಸಿಟಿಯ ಘಟಿಕೋತ್ಸವದಲ್ಲಿ ಭಾಗವಹಿಸಲು ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿಗೆ ಅವಕಾಶ ನೀಡದ ಘಟನೆ ಸೋಮವಾರ ನಡೆದಿದೆ.
ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಕೇರಳ ಮೂಲದ ರಬೀಹಾ ಅಬ್ದುರೆಹೀಂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಚಿನ್ನದ ಪದಕ ಪಡೆಯಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಏನಿದು ಘಟನೆ?
ಪಾಂಡಿಚೇರಿ ಯೂನಿರ್ವಸಿಟಿಯಲ್ಲಿ ಪದವಿ ಪ್ರದಾನ ಸಮಾರಂಭ ನಡೆಯುವ ಮುನ್ನವೇ ವಿದ್ಯಾರ್ಥಿನಿ ರಬೀಹಾಗೆ ಆಡಿಟೋರಿಯಂನಿಂದ ಹೊರ ಹೋಗುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ಆರೋಪಿಸಿದ್ದಾಳೆ. ಘಟಿಕೋತ್ಸವದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟನಾ ಭಾಷಣ ನಡೆಸಿದ ಹೊರಟು ಹೋದ ನಂತರ ರಬೀಹಾಳನ್ನು ಆಡಿಟೋರಿಯಂ ಒಳ ಹೋಗಲು ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಮಾರಂಭದಿಂದ ನಿರ್ಗಮಿಸಿದ ನಂತರ ಪದವೀಧರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಮುಂದುವರಿಸಲಾಗಿತ್ತು. ಆದರೆ ರಾಷ್ಟ್ರಪತಿ ಆಗಮನಕ್ಕೂ ಮುನ್ನ ಆಡಿಟೋರಿಯಂನಿಂದ ಹೊರಹೋಗಲು ಯಾಕೆ ಹೇಳಿದರು ಎಂಬುದು ಗೊತ್ತಾಗಿಲ್ಲ ಎಂದು ರಬೀಹಾ ದೂರಿದ್ದಾಳೆ.
ಘಟಿಕೋತ್ಸವದಲ್ಲಿ ರಬೀಹಾ ಪದವಿ ಪ್ರಮಾಣಪತ್ರ ಸ್ವೀಕರಿಸಿದ್ದು, ಸಿಎಎ ವಿರುದ್ಧದ ಪ್ರತಿಭಟನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಚಿನ್ನದ ಪದಕ ಸ್ವೀಕರಿಸಲು ನಿರಾಕರಿಸಿರುವುದಾಗಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೇ ತಾನು ಹಾಕಿಕೊಂಡಿದ್ದ ಸ್ಕಾರ್ಫ್ ಅನ್ನು ತೆಗೆಯುವಂತೆ ಪೊಲೀಸರು ಹೇಳಿದ್ದಕ್ಕೆ ನಾನು ನಿರಾಕರಿಸಿದ್ದರಿಂದ ಪೊಲೀಸರು ಆಡಿಟೋರಿಯಂನಿಂದ ಹೊರಕಳುಹಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಟ್ವೀಟ್ ನಲ್ಲಿ ರಬೀಹಾ ಸ್ಪಷ್ಟನೆ ನೀಡಿದ್ದಾಳೆ.