ದಿಢೀರ್ ಸಾವು ಹೆಚ್ಚಳ: ದೆಹಲಿ, ಕೇಂದ್ರ ಸರ್ಕಾರಕ್ಕೆ ನೋಟಿಸ್
Team Udayavani, Dec 11, 2022, 6:25 AM IST
ನವದೆಹಲಿ:ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಏಕಿ ಹಠಾತ್ ಆಗಿ ಸಾವು ಸಂಭವಿಸುವಂಥ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ.
ಇಂಥ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ, ಅದಕ್ಕೆ ಕಾರಣಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗಿದೆಯೇ ಎಂದೂ ಪ್ರಶ್ನಿಸಿದೆ. ಹಠಾತ್ ಸಾವಿಗೆ ಮತ್ತು ಕೊರೊನಾ ಸೋಂಕಿಗೆ ಏನಾದರೂ ಸಂಬಂಧ ಇದೆಯೇ ಎಂಬ ಪ್ರಶ್ನೆಯೂ ಉಂಟಾಗಿದೆ ಎಂದು ಆಯೋಗ ಪ್ರತಿಪಾದಿಸಿದೆ.
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಒಂದು ವರದಿಯನ್ನು ಉಲ್ಲೇಖಿಸಿರುವ ದೆಹಲಿ ಮಹಿಳಾ ಆಯೋಗ ಮದುವೆಯ ಮಂಟಪದಲ್ಲಿ ಇದ್ದ 20 ವರ್ಷ ಹರೆಯದ ವಧು ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಅಸುನೀಗಿದ್ದ, ಮಧ್ಯಪ್ರದೇಶದ ದೇಗುಲದ ಆವರಣದಲ್ಲಿ 16 ವರ್ಷದ ಹದಿಹರೆಯದ ಬಾಲಕ ಕ್ರಿಕೆಟ್ ಆಡುತ್ತಿದ್ದ ವೇಳೆ ನಿಧನ ಹೊಂದಿದ್ದ ಅಂಶವನ್ನು ಪ್ರಸ್ತಾಪಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕರಿಗೂ ಆಯೋಗ ನೋಟಿಸ್ ನೀಡಿ, ಸಾವಿನ ಬಗ್ಗೆ ಸ್ಪಷ್ಟನೆ ಕೇಳಿದೆ.