ಕೃಷಿಕರು, ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಏರಿಕೆ
Team Udayavani, Sep 10, 2020, 6:05 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್ಸಿಆರ್ಬಿ) 2019ರ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಒಟ್ಟು 42,480 ಕೃಷಿಕರು ಮತ್ತು ದಿನ ಗೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದು ಇದು 2018ಕ್ಕೆ ಹೋಲಿಸಿದರೆ ಶೇ. 6ರಷ್ಟು ಹೆಚ್ಚು. ಇದೇ ವೇಳೆ ದೈನಂದಿನ ವೇತನ ಪಡೆಯುವ ಕೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ಕಳೆದ ಆರು ವರ್ಷಗಳ ಅವಧಿಯಲ್ಲಿ ದುಪ್ಪಟ್ಟಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 2019ರಲ್ಲಿ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ 2018ರಲ್ಲಿ 10,357 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ವರ್ಷ 32,559 ದಿನಗೂಲಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 30,132 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಲ್ಲಿನ ರೈತ ನೆಮ್ಮದಿ?
ಎನ್ಸಿಆರ್ಬಿ ವರದಿ ಪ್ರಕಾರ ಪಶ್ಚಿಮ ಬಂಗಾಲ, ಬಿಹಾರ, ಒಡಿಶಾ, ಉತ್ತರಾಖಂಡ, ಮಣಿಪುರ, ಚಂಡೀಗಢ, ದಿಯೂ- ದಾಮನ್, ದಿಲ್ಲಿ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ರೈತರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಪಶ್ಚಿಮ ಬಂಗಾಲದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ಇಲ್ಲಿನ ರೈತರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿರುವುದು ವರದಿಯ ನೈಜತೆಯ ಬಗೆಗೆ ಅನುಮಾನ ಮೂಡುವಂತೆ ಮಾಡಿದೆ.
67% ಮಂದಿ 18-45 ವರ್ಷ ಒಳಗಿನವರು
2019ರಲ್ಲಿ ಒಟ್ಟು 1.39 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ 93,016 ಮಂದಿ ಅಥವಾ ಶೇ. 67ರಷ್ಟು ಜನರು 18ರಿಂದ 45 ವರ್ಷದೊಳಗಿನವರಾಗಿದ್ದಾರೆ. ಈ ಪೈಕಿ 31,725(ಶೇ.34) ಆತ್ಮಹತ್ಯೆಗಳು ಕೌಟುಂಬಿಕ ಕಾರಣಗಳಿಂದ ಘಟಿಸಿವೆ. ಇಲ್ಲಿ 7,293 (7.3)ಮಂದಿ ವಿವಾಹದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕರಲ್ಲಿ ಮಾನಸಿಕ ಅಸ್ವಸ್ಥತೆಯ ಕಾರಣದಿಂದ 6,491(ಶೇ. 7)ಮಂದಿ, ಮಾದಕ ವ್ಯಸನಗಳಿಂದ 5,257(ಶೇ. 5.6), ಪ್ರೇಮ ವೈಫಲ್ಯದ ಕಾರಣಕ್ಕಾಗಿ 4,919 (ಶೇ. 5.2)ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಸಿಆರ್ಬಿ ತನ್ನ ವರದಿಯಲ್ಲಿ ತಿಳಿಸಿದೆ.
ಕೃಷಿ ಕಾರ್ಮಿಕರು
2019ರಲ್ಲಿ 5,563 ಪುರುಷ ಮತ್ತು 394 ಮಹಿಳಾ ರೈತರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೃಷಿ ಕಾರ್ಮಿಕರ ಪೈಕಿ 3,749 ಪುರುಷರು, 575 ಸ್ತ್ರೀಯರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ದಿನಗೂಲಿ ನೌಕರಲ್ಲಿ 29,092 ಪುರುಷರು ಮತ್ತು 3,467ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೇಣು ಬಿಗಿದವರೇ ಹೆಚ್ಚು
ನೇಣಿಗೆ ಶರಣಾದವರು 53.6%
ವಿಷ ಸೇವನೆ 25.8%
ಇತರ ಹಾದಿ 5.8%
ನೀರಿನಲ್ಲಿ ಮುಳುಗಿ 5.2%
ಬೆಂಕಿಗೆ ಆಹುತಿ 3.8%
ವಾಹನಗಳ ಮೂಲಕ 2.4%
ಪ್ರಪಾತಕ್ಕೆ ಹಾರಿ 1.5%
ಗಂಭೀರ ಗಾಯಮಾಡಿಕೊಂಡು 0.6%
ಮಾತ್ರೆಗಳ ಸಹಾಯದಿಂದ 0.5%
ಸ್ವಯಂ ಶೂಟ್ 0.3%