ರಾಮಮಂದಿರಕ್ಕೆ ಮರಳುಗಲ್ಲಿನ ಪೂರೈಕೆ: ಗಣಿಗಾರಿಕೆಗೆ ಅನುಮತಿ
ಅಡಚಣೆ ಸರಿಪಡಿಸಲು ಮುಂದಾದ ರಾಜಸ್ಥಾನ ಸರ್ಕಾರ
Team Udayavani, Nov 20, 2020, 1:16 AM IST
ಜೈಪುರ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಗತ್ಯವಾಗಿರುವ ಮರಳುಗಲ್ಲಿನ ಗಣಿಗಾರಿಕೆ ನಡೆಸಲು ರಾಜಸ್ಥಾನ ಸರಕಾರ ಅನುಮತಿ ನೀಡಿದೆ.
ರಾಜಸ್ಥಾನದ ಬನ್ಸಿ ಪಹಾಡ್ಪುರವು ವಿಶಿಷ್ಟ ಮರಳುಗಲ್ಲಿಗೆ ಪ್ರಖ್ಯಾತವಾಗಿದ್ದು, ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕೆ ಇಲ್ಲಿಂದ ಸಾವಿರಾರು ಟನ್ ಮರಳುಗಲ್ಲನ್ನು ಒದಗಿಸಲಾಗಿದ್ದು, ಹಲವು ಮೂರ್ತಿಗಳನ್ನೂ ಕೆತ್ತಲಾಗಿದೆ. ಆದರೆ, ಈಗ ಮಂದಿರ ನಿರ್ಮಾಣ ಕಾರ್ಯ ವೇಗ ಪಡೆದಿರುವ ಕಾರಣ, ಮತ್ತಷ್ಟು ಪ್ರಮಾಣದ ಮರಳುಗಲ್ಲಿನ ಅಗತ್ಯವಿದೆ ಎನ್ನಲಾಗಿದೆ. ಎಲ್ಲಿ ಈ ವಿಶಿಷ್ಟ ಮರಳುಗಳ್ಳಿನ ಪೂರೈಕೆ ಸ್ಥಗಿತವಾಗಿಬಿಡುತ್ತದೋ ಎಂಬ ಆತಂಕ ಅಯೋಧ್ಯೆಯಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಸರಕಾರ ಪೂರೈಕೆ ವ್ಯವಸ್ಥೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ವಿಷಯವಾಗಿ ಮಾತನಾಡಿದ ವಿಶ್ವಹಿಂದೂ ಪರಿಷತ್ನ ಹಿರಿಯ ನಾಯಕ ತ್ರಿಲೋಕ್ನಾಥ್ ಪಾಂಡೆ “”ಮರಳುಗಲ್ಲಿನ ಪೂರೈಕೆಗೆ ರಾಜಸ್ಥಾನ ಸರಕಾರ ಎಂದೂ ಅಡ್ಡಿ ಮಾಡಿಲ್ಲ. ಆದರೆ, ಬನ್ಸಿಪಹಾಡ್ಪುರದಲ್ಲಿನ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯ ವಿಷಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉದ್ಭವವಾಗಿದ್ದವು. ಈಗ ರಾಜಸ್ಥಾನ ಸರಕಾರ ಆ ಪ್ರದೇಶವನ್ನು ಡಿನೊಟೀಫೈ ಮಾಡಲು ಕ್ರಮ ಕೈಗೊಳ್ಳುತ್ತಿದೆ” ಎಂದಿದ್ದಾರೆ.
ಭರತ್ಪುರದ ಜಿಲ್ಲಾಧಿಕಾರಿಗಳ ಪ್ರಕಾರ, ಬನ್ಸಿಪಹಾಡ್ಪುರ ಬ್ಲಾಕ್ ಅನ್ನು ಡಿನೊಟಿಫೈ ಮಾಡಲು ಆರಂಭಿಕ ಹೆಜ್ಜೆಗಳನ್ನಿಡಲಾಗಿದೆ. ಇದರಿಂದಾಗಿ, ಆ ಪ್ರದೇಶವು ಅರಣ್ಯಪ್ರದೇಶದ ಸ್ಟೇಟಸ್ ಕಳೆದುಕೊಳ್ಳಲಿದ್ದು, ಗಣಿಗಾರಿಕೆಗೆ ಸುಗಮ ಸಾಧ್ಯವಾಗಲಿದೆ.