ಜ.10ರಂದು ಸಂವಿಧಾನ ಪೀಠದಿಂದ ಅಯೋಧ್ಯೆ ಕೇಸ್ ವಿಚಾರಣೆ
Team Udayavani, Jan 8, 2019, 12:14 PM IST
ಹೊಸದಿಲ್ಲಿ : ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಅಯೋಧ್ಯೆ ಕೇಸನ್ನು ಇದೇ ಜನವರಿ 10ರ ಗರುವಾರದಂದು ವಿಚಾರಣೆಗೆತ್ತಿಕೊಳ್ಳಲಿದೆ.
ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಈ ಸಂವಿಧಾನ ಪೀಠದಲ್ಲಿ ಇರುವ ಇತರ ನ್ಯಾಯಮೂರ್ತಿಗಳೆಂದರೆ ಜಸ್ಟಿಸ್ಗಳಾದ ಎಸ್ ಎ ಬೋಬಡೆ, ಎನ್ ವಿ ರಮಣ, ಯು ಯು ಲಲಿತ್ ಮತ್ತು ಡಿ ವೈ ಚಂದ್ರಚೂಡ್.
ಅಯೋಧ್ಯೆಯ ವಿವಾದಿತ 2.7 ಎಕರೆ ನಿವೇಶನವನ್ನು ಸುನ್ನಿ ವಕ್ಫ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ ಲಲ್ಲಾ ಇವರೊಳಗೆ ಸಮಾನವಾಗಿ ಪಾಲು ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ನಾಲ್ಕು ಸಿವಿಲ್ ದಾವೆಗಳಿಗೆ ಸಂಬಂಧಿಸಿ 2010ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸುಮಾರು 14 ಅಪೀಲುಗಳನ್ನು ಸುಪ್ರೀಂ ಕೋರ್ಟ್ ಜನವರಿ 10ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.
ಈ ಮೊದಲು ಕಳೆದ ವರ್ಷ ಅಕ್ಟೋಬರ್ 29ರಂದು ಸುಪ್ರೀಂ ಕೋರ್ಟ್ ಅಯೋಧ್ಯೆ ಕೇಸನ್ನು ಸೂಕ್ತ ಪೀಠವು ಜನವರಿ ಮೊದಲ ವಾರದಲ್ಲಿ ವಿಚಾರಣೆಗೆ ಎತ್ತಿಕೊಳ್ಳುವುದೆಂದು ಹೇಳಿತ್ತು.