ಶಿವಲಿಂಗ ಉಜ್ಜುವಿಕೆಗೆ ಸುಪ್ರೀಂ ನಿರ್ಬಂಧ; ಶಿವಲಿಂಗ ಉಜ್ಜಿದರೆ ಪುರೋಹಿತರೇ ಹೊಣೆ
ದೇಗುಲಕ್ಕೆ ಭೇಟಿ ನೀಡುವ ಭಕ್ತರು ಶಿವಲಿಂಗವನ್ನು ಮುಟ್ಟಿ, ಉಜ್ಜದಂತೆ ನೋಡಿಕೊಳ್ಳಿ ಎಂದಿದೆ
Team Udayavani, Sep 2, 2020, 10:01 AM IST
ನವದೆಹಲಿ: ಉಜ್ಜಯಿನಿಯ ಪ್ರಾಚೀನ ಮಹಾಕಾಲೇಶ್ವರ ದೇವಾಲಯದಲ್ಲಿನ ಶಿವಲಿಂಗವು ಶಿಥಿಲಗೊಳ್ಳುತ್ತಿರುವುದು ಹಾಗೂ ಸವೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಇನ್ನು ಮುಂದೆ ಭಕ್ತಾದಿಗಳು ಶಿವಲಿಂಗವನ್ನು ಉಜ್ಜುವಂತಿಲ್ಲ ಎಂಬ ಮಹತ್ವದ ಆದೇಶ ನೀಡಿದೆ.
ಜತೆಗೆ, ಭಸ್ಮಾರತಿಯ ವೇಳೆ ಬಳಸಲಾಗುವ ಭಸ್ಮದ ಪಿಎಚ್ ಮಟ್ಟ(ಆಮ್ಲಿಯತೆ ಅಳೆಯಲು ಬಳಸುವ ಮಾಪನ)ವನ್ನು ಸುಧಾರಿಸುವ ಮೂಲಕ ಶಿವಲಿಂಗ ಮತ್ತಷ್ಟು ಶಿಥಿಲಗೊಳ್ಳುವುದನ್ನು ತಡೆಯುವಂತೆಯೂ ದೇಗುಲದ ಸಮಿತಿಗೆ ನ್ಯಾ.ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಾಚೀನ ದೇಗುಲದಲ್ಲಿನ ಶಿವಲಿಂಗವನ್ನು ಸಂರಕ್ಷಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುವ ನ್ಯಾಯಪೀಠ, ಯಾವುದೇ ಕಾರಣಕ್ಕೂ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಶಿವಲಿಂಗವನ್ನು ಮುಟ್ಟಿ, ಉಜ್ಜದಂತೆ ನೋಡಿಕೊಳ್ಳಿ ಎಂದಿದೆ. ಒಂದು ವೇಳೆ ಸೂಚನೆಯ ಹೊರತಾಗಿಯೂ ಭಕ್ತಾದಿಗಳು ಶಿವಲಿಂಗವನ್ನು ಉಜ್ಜಿದರೆ, ಅಲ್ಲಿರುವ ಪೂಜಾರಿ ಅಥವಾ ಪುರೋಹಿತರೇ ಹೊಣೆಯಾಗುತ್ತಾರೆ.
ದೇವಾಲಯದ ವತಿಯಿಂದ ನಡೆಯುವ ಸಾಂಪ್ರದಾಯಿಕ ಪೂಜೆ ಮತ್ತು ಅರ್ಚನೆಯ ಹೊರತಾಗಿ ಬೇರೆ ಯಾವ ಸಂದರ್ಭದಲ್ಲೂ ಶಿವಲಿಂಗವನ್ನು ಉಜ್ಜಬಾರದು ಎಂದೂ ನ್ಯಾಯಪೀಠ ಸ್ಪಷ್ಟವಾಗಿ ಸೂಚಿಸಿದೆ.
ಶಿವನ ಕೃಪೆ: ಸುಮಾರು 6 ವರ್ಷಗಳ ಕಾಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ನ್ಯಾ.ಅರುಣ್ ಮಿಶ್ರಾ ಬುಧವಾರ ನಿವೃತ್ತಿಯಾಗಲಿದ್ದು, ಮಂಗಳವಾರ ತಮ್ಮ ಸೇವಾವಧಿಯ ಕೊನೆಯ ಪ್ರಕರಣದ ತೀರ್ಪನ್ನು ನೀಡಿದ್ದಾರೆ.
ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲದ ಜ್ಯೋತಿರ್ಲಿಂಗವನ್ನು ಸಂರಕ್ಷಿಸುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ಪ್ರಕಟಿಸಿದ ಬಳಿಕ ನ್ಯಾ.ಮಿಶ್ರಾ, ‘ಶಿವನ ಕೃಪೆಯಿಂದ ಕೊನೆಯ ತೀರ್ಪನ್ನು ನೀಡಿದ್ದೇನೆ ‘ ಎಂದು ಹೇಳಿದ್ದಾರೆ.
ಬಾಕಿ ಪಾವತಿಗೆ 10 ವರ್ಷ ಸಮಯ
ಸ್ವತಃ ಕೇಂದ್ರಸರ್ಕಾರವೇ ದೂರಸಂಪರ್ಕ ಸಂಸ್ಥೆಗಳ ಬಾಕಿ ಪಾವತಿಗೆ 20 ವರ್ಷ ಅವಧಿ ನೀಡಲು ಸಿದ್ಧವಿದ್ದರೂ, ಸರ್ವೋಚ್ಚ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ಸರ್ಕಾರಕ್ಕೆ 1.6 ಲಕ್ಷ ಕೋಟಿ ರೂ. ಬಾಕಿ ಹಣ ನೀಡಬೇಕಾಗಿರುವ ವೊಡಾಫೋನ್, ಭಾರ್ತಿ ಏರ್ಟೆಲ್, ಟಾಟಾ ಟೆಲಿಸರ್ವಿಸಸ್ಗೆ ಅದನ್ನು ಪಾವತಿಸಲು 10 ವರ್ಷ ಮಾತ್ರ ಸಮಯ ನೀಡಿದೆ. ಮುಂದಿನ ವರ್ಷ ಮಾ.31ರೊಳಗೆ ಶೇ.10ರಷ್ಟು ಹಣ ಕಟ್ಟುವುದು ಕಡ್ಡಾಯ ಎಂದಿದೆ.