370ನೇ ವಿಧಿ ರದ್ಧತಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ: ಕೇಂದ್ರಕ್ಕೆ 28ದಿನಗಳ ಗಡುವು
Team Udayavani, Oct 1, 2019, 3:17 PM IST
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ದೂರು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ನ್ಯಾಯಾಲವು ಕೇಂದ್ರ ಸರಕಾರಕ್ಕೆ ನಾಲ್ಕ ವಾರಗಳ ಕಾಲಾವಕಾಶ ನೀಡಿದೆ.
370ನೇ ವಿಧಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನವೆಂಬರ್ 14ಕ್ಕೆ ಮುಂದೂಡಿದೆ ಮತ್ತು ಮುಂದಿನ ವಿಚಾರಣೆಯು ಇದೇ ದಿನಾಂಕದಂದು ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಪುನರ್ ಸಂಘಟನಾ ಕಾಯ್ದೆಯ ಅನುಷ್ಠಾನಕ್ಕೆ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ.
ಕೆಂದ್ರ ಮತ್ತು ಜಮ್ಮು ಕಾಶ್ಮೀರ ಆಡಳಿತ ಸಲ್ಲಿಸಿರುವ ಅಫಿದವಿತ್ ಗೆ ಪ್ರತಿಕ್ರಿಯೆ ಸಲ್ಲಿಸಲು ದೂರುದಾರರಿಗೆ ನಾಲ್ಕುವಾರಗಳ ಅವಧಿ ಸಾಕಷ್ಟಾಗುತ್ತದೆ ಎಂದು ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್, ಆರ್. ಸುಭಾಶ್ ರೆಡ್ಡಿ, ಬಿ.ಆರ್. ಗವಾಯ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐವರು ಸದಸ್ಯರ ಪೀಠವು ಅಭಿಪ್ರಾಯಪಟ್ಟಿತು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿ ಮತ್ತು ಆರ್ಟಿಲಕ್ 35ಎ ಅನ್ನು ರಾಷ್ಟ್ರಪತಿಗಳ ಆದೇಶದ ಮೂಲಕ ರದ್ದುಗೊಳಿಸಿದ ಕೆಂದ್ರ ಸರಕಾರದ ಕ್ರಮದ ಸಾಂವಿಧಾನಿಕ ಔಚಿತ್ಯವನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಜಮ್ಮು ಕಾಶ್ಮೀರ ರಾಜ್ಯವನ್ನು ವಿಭಜನೆ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಿರುವ ಕೆಂದ್ರದ ನಿರ್ಧಾರವನ್ನೂ ಸಹ ದೂರುದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.