ಕಥುವಾ ಕೇಸ್ ಪಠಾಣ್ಕೋಟ್ಗೆ; ದಿನವಹಿ ವಿಚಾರಣೆಗೆ ಸುಪ್ರೀಂ ಆದೇಶ
Team Udayavani, May 7, 2018, 4:11 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಕೊಲೆಗೈಯಲಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಪಠಾಣ್ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಿದೆ; ಪ್ರಕರಣದ ವಿಚಾರಣೆಯನ್ನು ದಿನ ನಿತ್ಯ ಕೈಗೊಳ್ಳುವಂತೆ ಆದೇಶಿಸಿದೆ.
ಬಾಲಕಿಯ ತಂದೆಯು ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿದ ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಪೀಠವು ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸನ್ನು ಪಠಾಣ್ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸುವ ಆದೇಶ ಹೊರಡಿಸಿತು. ಬಾಲಕಿಯ ತಂದೆಯು ತನಗೆ, ತನ್ನ ಕುಟುಂಬದವರಿಗೆ ಮತ್ತು ತನ್ನ ವಕೀಲರಾಗಿರುವ ದೀಪಿಕಾ ಸಿಂಗ್ ರಾಜಾವತ್ ಅವರಿಗೆ ಜೀವ ಬೆದರಿಕೆ ಇರುವುದನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದರು.
ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸು ನಿಷ್ಪಕ್ಷ, ನಿರ್ಭೀತ ಮತ್ತು ಕಳಂಕರಹಿತ ವಿಚಾರಣೆಯನ್ನು ಕಾಣುವಲ್ಲಿ ಕಿಂಚಿತ್ ಸಂದೇಹ ಕಂಡು ಬಂದರೂ ತಾನು ಕೇಸಿನ ವಿಚಾರಣೆಯನ್ನು ಬೇರೆ ಕೋರ್ಟಿಗೆ ವರ್ಗಾಯಿಸುವುದಾಗಿ ಸುಪ್ರೀಂ ಕೋರ್ಟ್ ಈ ಮೊದಲೇ ಹೇಳಿತ್ತು. ಪಠಾಣ್ಕೋಟ್ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ಕ್ಯಾಮೆರಾಗಳ ಮುಂದೆ ನಡೆಸುವಂತೆಯೂ ಸುಪ್ರೀಂ ಕೋರ್ಟ್ ಇಂದು ಆದೇಶಿಸಿತು.
ಜಮ್ಮು ಕಾಶ್ಮೀರ ಸರಕಾರ ಪಠಾಣ್ಕೋಟ್ ಕೋರ್ಟಿನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಬೇಕು; ಸಂತ್ರಸ್ತ ಬಾಲಕಿಯ ಕುಟುಂಬದವರಿಗೆ, ವಕೀಲರಿಗೆ ಮತ್ತು ಸಾಕ್ಷಿದಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶಿಸಿತು.