ರಾಮನ ನಿಖರ ಜನ್ಮಸ್ಥಳ ಕುರಿತ ವಾದಕ್ಕೆ ಸುಪ್ರೀಂ ಆಕ್ಷೇಪ
Team Udayavani, Sep 25, 2019, 5:00 AM IST
ಹೊಸದಿಲ್ಲಿ: ಹಿಂದೂಗಳು ಎರಡು ಪವಿತ್ರ ಗ್ರಂಥಗಳಾದ “ವಾಲ್ಮೀಕಿ ರಾಮಾಯಣ’ ಹಾಗೂ “ರಾಮಚರಿತಮಾನಸ’ದಲ್ಲಿ ಎಲ್ಲೂ ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂದು ನಿಖರವಾಗಿ ಉಲ್ಲೇಖೀಸಲಾಗಿಲ್ಲ ಎಂಬ ಮುಸ್ಲಿಂ ಸಂಘಟನೆಗಳ ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಮಂಗಳವಾರ ನಡೆದ ಅಯೋಧ್ಯೆಯ ಭೂವಿವಾದ ಕುರಿತ ವಿಚಾರಣೆ ವೇಳೆ, ಮುಸ್ಲಿಂ ಕಕ್ಷಿದಾರರ ಪರ ವಕೀಲ ಝಫರ್ಯಾಬ್ ಜಿಲಾನಿ ಈ ವಾದ ಮಂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ, “ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸದಲ್ಲಿ ರಾಮನ ಜನ್ಮಸ್ಥಳದ ಮಾಹಿತಿಯಿಲ್ಲ ಎಂಬ ಏಕೈಕ ಕಾರಣಕ್ಕೆ, ಶ್ರೀರಾಮ ಆ ನಿರ್ದಿಷ್ಟ ಪ್ರದೇಶದವಲ್ಲೇ ಜನ್ಮ ತಾಳಿದ ಎಂಬ ನಂಬಿಕೆಯನ್ನು ಹಿಂದೂಗಳು ಇಟ್ಟುಕೊಳ್ಳಬಾರದೇ’ ಎಂದು ಪ್ರಶ್ನಿಸಿತು.
ಅದಕ್ಕೆ ಪ್ರತಿಕ್ರಿಯಿಸಿದ ವಕೀಲ ಝಫರ್ಯಾಬ್, ಶ್ರೀರಾಮನು ಅಯೋಧ್ಯೆಯಲ್ಲೇ ಹುಟ್ಟಿದ್ದು ಎಂಬ ನಂಬಿಕೆ ನಿಜವೇ ಆಗಿರಬಹುದು. ಆದರೆ, ಅಯೋ ಧ್ಯೆಯ ಯಾವ ಪ್ರದೇಶದಲ್ಲಿ ಹುಟ್ಟಿದ್ದು ಎಂಬುದೇ ಈಗಿರುವ ಪ್ರಶ್ನೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಿಂದೂಧರ್ಮ ಎನ್ನುವುದು ಅತ್ಯಂತ ವಿಶಾಲ ಹಾಗೂ ಸಮಗ್ರ ವಾದದ್ದು, ಅದು ಈ ಎರಡು ಗ್ರಂಥಗಳಿಗೆ ಸೀಮಿತ ವಾಗಿಲ್ಲ. ಹಾಗೆ ನೋಡಿದರೆ, ಸ್ಕಂದ ಪುರಾಣದಲ್ಲಿ ಶ್ರೀರಾಮನ ಜನ್ಮಸ್ಥಳದ ಬಗ್ಗೆ ನಿಖರ ಮಾಹಿತಿಯೂ ಇದೆಯಲ್ಲವೇ ಎಂದು ಪ್ರಶ್ನಿಸಿತು.