ಸತತ ನಾಲ್ಕನೇ ಬಾರಿಗೆ ಭಯ್ಯಾಜಿ ಜೋಷಿ ಆಯ್ಕೆ
Team Udayavani, Mar 11, 2018, 6:05 AM IST
ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ( ಪ್ರಧಾನ ಕಾರ್ಯದರ್ಶಿ)ರಾಗಿ ಸತತ ನಾಲ್ಕನೇ ಬಾರಿಗೆ ಸುರೇಶ್ ಭಯ್ಯಾಜಿ ಜೋಷಿ ಅವರೇ ಆಯ್ಕೆಯಾಗಿದ್ದಾರೆ.
ಇಲ್ಲಿನ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರತಿನಿಧಿ ಸಭೆಯಲ್ಲಿ ಜೋಷಿ ಅವರೇ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಚಾರ ಪ್ರಮುಖ್ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ಆರ್ಎಸ್ಎಸ್ನ ಎರಡನೇ ಅತ್ಯಂತ ಮಹತ್ವದ ಹುದ್ದೆ ಎಂದೇ ಪರಿಗಣಿಸಲಾಗಿರುವ ಸರಕಾರ್ಯವಾಹ ಸ್ಥಾನಕ್ಕೆ ಕರ್ನಾಟಕದ ದತ್ತಾತ್ರೇಯ ಹೊಸ ಬಾಳೆ ಅವರು ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೆಲ ದಿನಗಳಿಂದ ಕೇಳಿ ಬರುತ್ತಿದ್ದವು. ಆದರೆ, ಈ ಸಭೆಯಲ್ಲಿ ಬೇರೊಬ್ಬರ ಆಯ್ಕೆ ಬಗ್ಗೆ ಚರ್ಚೆಯೇ ನಡೆಯಲಿಲ್ಲ ಎಂದು ವೈದ್ಯ ಹೇಳಿದ್ದಾರೆ. ಇದೇ ವೇಳೆ ವಿ. ನಾಗರಾಜ್ ಅವರು ಕ್ಷೇತ್ರೀಯ ಸಂಘಚಾಲಕ್ ಆಗಿ ಮರು ಆಯ್ಕೆ ಯಾಗಿದ್ದಾರೆ. 2021ರ ವರೆಗೆ ಈ ಹುದ್ದೆ ಯಲ್ಲಿ ಕಾರ್ಯನಿರ್ವ ಹಿಸಲಿರುವ ಜೋಷಿ ಅವರು, ದೀರ್ಘಾವಧಿ ವರೆಗೆ ಈ ಹುದ್ದೆ ಯಲ್ಲಿ ಕಾರ್ಯ ನಿರ್ವಹಿಸಿದ ಎಚ್.ವಿ.ಶೇಷಾದ್ರಿ ಅವರ ದಾಖಲೆ ಹತ್ತಿರಕ್ಕೆ ಬರಲಿದ್ದಾರೆ. ಶೇಷಾದ್ರಿ ಅವರು 1987ರಿಂದ 2000 ರವರೆಗೆ ಈ ಹುದ್ದೆಯಲ್ಲಿದ್ದರು.
ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ: ಮಾತೃ ಭಾಷೆ ಅಥವಾ ಯಾವುದೇ ಭಾರತೀಯ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಒದಗಿಸಬೇಕು. ಇದಕ್ಕಾಗಿ ಸರಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಆರೆಸ್ಸೆಸ್ ನಿಲುವಳಿ ಮಂಡಿಸಿದೆ. ಪ್ರತಿನಿಧಿ ಸಭೆಯಲ್ಲಿ ಈ ಸಂಬಂಧ ಒತ್ತಾಯಿಸಲಾಗಿದೆ. ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಯಲ್ಲೂ ಎಲ್ಲ ಸ್ಥಳೀಯ ಭಾಷೆಯ ಆಯ್ಕೆ ಅವಕಾಶವೂ ಇರಬೇಕು. ಬೋಧನೆ ಮತ್ತು ಅಧ್ಯಯನ ಪಠ್ಯವೂ ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ.
ಆಕಾಶವಾಣಿಗಿಂತ ಪ್ರಭಾವಿ: ಭಾರತದ ಶೇ.92ರಷ್ಟು ಭೂಭಾಗವನ್ನು ಆಕಾಶವಾಣಿ ವ್ಯಾಪಿಸಿದ್ದರೆ, ಆರೆಸ್ಸೆಸ್ ಶೇ. 95 ರಷ್ಟು ಭೂಭಾಗ ವ್ಯಾಪಿಸಿದ್ದಾಗಿ ಹೇಳಲಾಗಿದೆ. ನಾಗಾ ಲ್ಯಾಂಡ್, ಮಿಜೋರಾಂ, ಕಾಶ್ಮೀರದ ಕೆಲ ಭಾಗ ಹೊರತು ಪಡಿಸಿ ಬಹುತೇಕ ಪ್ರದೇಶಗಳನ್ನು ವ್ಯಾಪಿಸಿದ್ದೇವೆ ಎಂದು ಆರೆಸ್ಸೆಸ್ನ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಹೇಳಿದ್ದಾರೆ.