ಪಂಚಭೂತಗಳಲ್ಲಿ ಶೇಷನ್ ಲೀನ
Team Udayavani, Nov 12, 2019, 1:56 AM IST
ಚೆನ್ನೈ: ರವಿವಾರ ರಾತ್ರಿ ನಿಧನ ಹೊಂದಿದ ಕೇಂದ್ರ ಚುನಾವಣ ಆಯೋಗದ ಮಾಜಿ ಆಯುಕ್ತ ಟಿ.ಎನ್. ಶೇಷನ್ ಅವರ ಅಂತ್ಯಸಂಸ್ಕಾರ ಸೋಮವಾರ ನೆರವೇರಿತು. ಚೆನ್ನೈನಲ್ಲಿನ ಬೆಸೆಂಟ್ ನಗರದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅದಕ್ಕೂ ಮೊದಲು ಆಳ್ವಾರ್ ಪೇಟೆಯಲ್ಲಿರುವ ಅವರ ನಿವಾಸಕ್ಕೆ ಸೋಮವಾರ ಬೆಳಗ್ಗೆಯಿಂದಲೇ ಅನೇಕ ನಾಯಕರು, ಅಭಿಮಾನಿಗಳು ಆಗಮಿಸಿ ಪುಷ್ಪನಮನ ಸಲ್ಲಿಸಿದರು. ದಿಲ್ಲಿಯಿಂದ ಚೆನ್ನೈಗೆ ಆಗಮಿಸಿದ್ದ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಸುದೀಪ್ ಜೈನ್, ಶೇಷನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಶೇಷನ್ ಅವರು ಭಾರತೀಯ ಚುನಾವಣ ಪ್ರಕ್ರಿಯೆಯಲ್ಲಿನ ಎಲ್ಲ ಅಂಶಗಳನ್ನೂ ಪರಿಷ್ಕರಿಸಿದ್ದರು. ಚುನಾವಣ ಆಯೋಗಕ್ಕೆ ಇರುವ ಸಾಂವಿಧಾನಿಕ ಹಾಗೂ ಸ್ವಾಯತ್ತತೆಯ ಅಧಿಕಾರವೇನೆಂಬುದನ್ನು ತೋರಿಸಿಕೊಟ್ಟರು. ಚುನಾವಣ ರಂಗದಲ್ಲಿ ಹಣ ಮತ್ತು ತೋಳ್ಬಲಗಳನ್ನು ಹತ್ತಿಕ್ಕುವಲ್ಲಿ ಶೇಷನ್ರವರ ಪಾತ್ರ ಹಿರಿದು’ ಎಂದು ಶ್ಲಾಘಿಸಿದರು.