ತಮಿಳು ಚಿತ್ರಕ್ಕೆ ತೆರಿಗೆ ತೆಗೆಯಿರಿ: ರಜನಿಕಾಂತ್
Team Udayavani, Jul 6, 2017, 3:45 AM IST
ಚೆನ್ನೈ: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಶೀಘ್ರದಲ್ಲಿಯೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವದಂತಿಗಳ ನಡುವೆಯೇ ತಮಿಳು ಚಿತ್ರರಂಗದ ಮೇಲೆ ಜಿಎಸ್ಟಿಯಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ರಕ್ಷಿಸಬೇಕು ಎಂದು ಅವರು ತಲೈವಾ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮಿಳುನಾಡು ಸರ್ಕಾರ ವಿಧಿಸುತ್ತಿರುವ ಶೇ.30ರಷ್ಟು ಮುನಿಸಿಪಲ್ ಟ್ಯಾಕ್ಸ್ನಿಂದ ತಮಿಳು ಚಿತ್ರರಂಗದ ಮೇಲೆ ಪ್ರತಿ ದಿನ 20 ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಎಸ್ಟಿ ಜಾರಿಯಾದ ಬಳಿಕ ಕೇರಳ ಮತ್ತು ಇತರ ರಾಜ್ಯ ಸರ್ಕಾರಗಳು ತಾವು ವಿಧಿಸುತ್ತಿದ್ದ ತೆರಿಗೆ ಹಿಂಪಡೆದುಕೊಂಡಿವೆ. ಅದನ್ನಾದರೂ ತಮಿಳುನಾಡು ಸರ್ಕಾರ ಮಾಡಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಹಿಂದಿಯ ನಂತರ ತಮಿಳು ಚಿತ್ರೋದ್ಯಮ ಎರಡನೆ ದೊಡ್ಡ ಸಿನಿ ಉದ್ಯಮವಾಗಿದ್ದು ಇದರ ರಕ್ಷಣೆಗೆ ಸರ್ಕಾರ ಧಾವಿಸಬೇಕು ಎಂದಿದ್ದಾರೆ. ಚಿತ್ರೋದ್ಯಮದಿಂದ ಲಕ್ಷಾಂತರ ಕುಟುಂಬಗಳಿಗೆ ನೆರವಾಗಿದೆ. ಅವುಗಳ ನೆರವಿಗೆ ಧಾವಿಸಬೇಕಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ರಜನಿ ಟ್ವೀಟ್ಗೆ ಬಹುಭಾಷಾ ನಟ ಕಮಲ್ಹಾಸನ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅಂದರೆ ಸೋಮವಾರದಿಂದ ತಮಿಳುನಾಡಿನಲ್ಲಿ 1 ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳು ಪ್ರದರ್ಶನ ಸ್ಥಗಿತಗೊಳಿಸಿವೆ.