ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ
Team Udayavani, Apr 18, 2021, 7:28 PM IST
ಚನ್ನೈ : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಏಪ್ರಿಲ್ 20 ರಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರಿ ಆದೇಶ ಹೊರಡಿಸಿದೆ.
ಭಾನುವಾರ ಸಂಜೆ ಸರ್ಕಾರ ಹೊರಡಿಸಿರುವ ನೂತನ ನಿಯಮಾವಳಿ ಪ್ರಕಾರ ಏಪ್ರಿಲ್ 20 ರಿಂದ ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 4 ಗಂಟೆಯವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಾಗಲಿದೆ. ಈ ಅವಧಿಯಲ್ಲಿ ಕೇವಲ ಮೂಲಭೂತ ಸೌಲಭ್ಯಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.
ರಾತ್ರಿ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಚಾರ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ ಹೊರ ರಾಜ್ಯಗಳ ವಾಹನ ಸಂಚಾರವನ್ನೂ ಬಂದ್ ಮಾಡಲಾಗಿದೆ.
ತುರ್ತು ಆರೋಗ್ಯ ಕೇಂದ್ರ, ರೈಲು ಹಾಗೂ ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಸೇವೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹಾಲು ಹಾಗೂ ದಿನಪತ್ರಿಕೆಗಳ ವಿತರಣೆಗೆ ಅನುಮತಿ ನೀಡಲಾಗಿದೆ.
ಬಿಹಾರಿನಲ್ಲೂ ನೈಟ್ ಕರ್ಫ್ಯೂ :
ಇತ್ತ ಬಿಹಾರ್ ನಲ್ಲಿಯೂ ನೈಟ್ ಕರ್ಫ್ಯೂ ಹೇರಿ ಆದೇಶ ಹೊರಡಿಸಲಾಗಿದೆ. ಭಾನುವಾರ ನೂತನ ನಿಯಮಗಳನ್ನುಪ್ರಕಟಿಸಿರುವ ಮುಖ್ಯಮಂತ್ರಿ ನಿತಿಶ್ ಕುಮಾರ್, ಸದ್ಯ ಇರುವ ನೈಟ್ ಕರ್ಫ್ಯೂವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೂ ಮಾಲ್, ಪಾರ್ಕ್, ಚಿತ್ರಮಂದಿರಗಳು ಹಾಗೂ ಶಾಲಾ ಕಾಲೇಜುಗಳು ಮೇ 15 ರ ವರೆಗೆ ಬಾಗಿಲು ಮುಚ್ಚಲಿವೆ ಎಂದು ಹೇಳಿದ್ದಾರೆ.