ವಿದ್ಯಾರ್ಥಿ ಜೊತೆ ಟೀಚರ್ ಪ್ರೇಮ ಪಾಠ: ಆತ್ಮಹತ್ಯೆಯಲ್ಲಿ ಕೊನೆಯಾಯ್ತು ಬದುಕಿನಾಟ
Team Udayavani, Dec 22, 2019, 2:41 PM IST
ಹೈದರಾಬಾದ್: ಮನೆಯಲ್ಲಿ ಮದುವೆಗೆ ಒಪ್ಪಲಿಲ್ಲವೆಂದು ಪ್ರೇಮಿಗಳು ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ.
ಮೃತ ಗೌತಮಿ(28) ಪ್ರಾಧ್ಯಪಕಿಯಾಗಿದ್ದು ತನ್ನ ಕಾಲೇಜಿನಲ್ಲಿ ಓದುತ್ತಿದ್ದ ಲೋಕೇಶ್(19) ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೇ ಇವರ ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿರಲಿಲ್ಲ. ಇದರಿಂದ ಮನನೊಂದು ಆತ್ಮ ಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮವಾಗಿ ಗೌತಮಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಲೊಕೇಶ್ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗೌತಮಿ ಗನ್ನವರಂ ಮಂಡಲ ತೆಂಪಲ್ಲಿ ನಿವಾಸಿಯಾಗಿದ್ದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕಿಯಾಗಿದ್ದರು. ಲೊಕೇಶ್ ಕೂಡ ಅದೇ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದ. ಇಬ್ಬರು ಕೂಡ ಪರಿಚಿತರಾಗಿ ಪ್ರೀತಿಸಲು ಆರಂಭಿಸಿದ್ದರು. ಆದರೇ ವಯಸ್ಸಿನ ನಡುವೆ ಭಾರೀ ಅಂತರ ಇದ್ದುದರಿಂದ ಎರಡು ಕುಟುಂಬದವರು ಮದುವೆಗೆ ಒಪ್ಪಲಿಲ್ಲ.
ಇದರಿಂದ ನೊಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿ ಕೀಟನಾಶಕ ಔಷಧಿ ಸೇವಿಸಿದ್ದರು. ರಾತ್ರಿಯಾದರೂ ರೂಮಿನಿಂದ ಇಬ್ಬರು ಹೊರ ಬಾರದೇ ಇರುವುದನ್ನು ಕಂಡು ಹೊಟೇಲ್ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಒಳಹೊಕ್ಕಾಗ ಇಬ್ಬರು ವಿಷ ಸೇವಿಸಿರುವುದು ಕಂಡುಬಂದಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ಅಷ್ಟರಲ್ಲಿಯೇ ಗೌತಮಿ ಮೃತಪಟ್ಟಿದ್ದಾರೆ. ಲೊಕೇಶ್ ಸಾವಿನಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಗೌತಮಿಗೆ ಈಗಾಗಲೇ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು.