ಕೋವಿಡ್-19: ತೆಲಂಗಾಣ ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ರದ್ದು, ಎಲ್ಲರೂ ಪಾಸ್
Team Udayavani, Jun 9, 2020, 10:07 AM IST
ಹೈದರಾಬಾದ್: ದೇಶಾದ್ಯಂತ ಕೋವಿಡ್-19 ಸೋಂಕು ಹಾವಳಿ ಮುಂದುವರಿದಿದೆ. ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ಕೋವಿಡ್-19 ಕಾರಣದಿಂದ ಮುಂದೂಡಿಕೆಯಾಗಿದೆ. ಕರ್ನಾಟಕದಲ್ಲೂ ಎಸ್ಎಸ್ ಎಲ್ ಸಿ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ಆದರೆ ತೆಲಂಗಾಣ ರಾಜ್ಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಇರಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.
ತೆಲಂಗಾಣ ಸರಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಕೋವಿಡ್ 19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವುದರಿಂದ ರಾಜ್ಯದಲ್ಲಿ ಎಸ್ ಎಸ್ ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದಿದೆ. ಪರೀಕ್ಷೆ ನಡೆಸುವ ವೇಳೆ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಅಪಾಯವಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ತೆಲಂಗಾಣದಲ್ಲಿ ಈ ವರ್ಷ 5,34,903 ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಬರೆಯಲಿದ್ದರು. ಆದರೆ ಈ ವರ್ಷ ಪರೀಕ್ಷೆ ಇಲ್ಲದ ಕಾರಣ ಎಲ್ಲರನ್ನೂ ಪಾಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಇಂಟರ್ನಲ್ ಪರೀಕ್ಷೆ ಮಾರ್ಕ್ ಆಧಾರದ ಮೇಲೆ ಗ್ರೇಡ್ ನೀಡಲಾಗುವುದು ಎನ್ನಲಾಗಿದೆ.
ಕರ್ನಾಟಕದಲ್ಲಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಸರಕಾರ ಕ್ರಮ ಕೈಗೊಂಡಿದ್ದು, ಜೂನ್ 25ರಿಂದ ಜುಲೈ ನಾಲ್ಕರವರೆಗೆ ಪರೀಕ್ಷೆ ನಡೆಯಲಿದೆ.