ಆಸ್ತಿ ವಿವಾದ: ಉತ್ತರಪ್ರದೇಶದಲ್ಲಿ ಅರ್ಚಕರಿಗೆ ಗುಂಡಿಕ್ಕಿದ ದುಷ್ಕರ್ಮಿಗಳು, ಇಬ್ಬರ ಬಂಧನ
Team Udayavani, Oct 11, 2020, 2:06 PM IST
ಗೊಂಡಾ: ರಾಜಸ್ಥಾನದ ಕಲೌರಿಯಲ್ಲಿ ದೇವಾಲಯದ ಅರ್ಚಕರಿಗೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ ಭೀಕರ ಘಟನೆಯ ಮಾಸುವ ಮುನ್ನವೇ, ಉತ್ತರಪ್ರದೇಶದಲ್ಲಿ ಕೂಡ ಅರ್ಚಕರೋರ್ವರಿಗೆ ಗುಂಡು ಹಾರಿಸಲಾಗಿದೆ.
ಗೊಂಡಾ ಜಿಲ್ಲೆಯಲ್ಲಿ ಆ. 11ರ ಶನಿವಾರ ಈ ದುರ್ಘಟನೆ ನಡೆದಿದ್ದು, ದೀರ್ಘಕಾಲದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಅರ್ಚಕ ಸಾಮ್ರಾಟ್ ದಾಸ್ ಗೆ ಗುಂಡು ಹಾರಿಸಿ, ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ
ಸಾಮ್ರಾಟ್ ದಾಸ್ ಗೊಂಡಾ ಜಿಲ್ಲೆಯ ರಾಮ್ ಜಾನಕಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ಕೂಡಲೇ ಅರ್ಚಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಭಾನುವಾರ ಲಕ್ನೋದಲ್ಲಿನ ಹಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅದಾಗ್ಯೂ ಅರ್ಚಕ ಸಾಮ್ರಾಟ್ ದಾಸ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮುಸ್ಲಿಂ,ದಲಿತರನ್ನು ಮನುಷ್ಯರೆಂದು ಪರಿಗಣಿಸುತ್ತಿಲ್ಲ: ಯೋಗಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷವೂ ಜಾನಕಿ ರಾಮ್ ದೇವಾಲಯದ ಮತ್ತೊಬ್ಬ ಅರ್ಚಕ ಮಹಾಂತ್ ಸಿತಾರಾಮ್ ದಾಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಮತ್ತೊಮ್ಮೆ ಅದೇ ದೇವಾಲಯದ ಅರ್ಚಕರ ಮೇಲೆ ದಾಳಿ ನಡೆಸಲಾಗಿದೆ.