ಜಂತರ್ ಮಂತರ್: ಪ್ರತಿಭಟನೆ ನಿರತ ಮಾಜಿ ಸೈನಿಕರ ಎತ್ತಂಗಡಿ
Team Udayavani, Oct 30, 2017, 12:18 PM IST
ಹೊಸದಿಲ್ಲಿ : ಐತಿಹಾಸಿಕ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆ, ಧರಣಿ ಇತ್ಯಾದಿಗಳನ್ನು ನಿಷೇಧಿಸುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದೊಂದಿಗೆ ಇಂದು ಸೋಮವಾರ ಸಜ್ಜಿತರಾಗಿ ಬಂದ ಪೊಲೀಸರು ಹಾಗೂ ಪೌರಾಡಳಿತ ಅಧಿಕಾರಿಗಳು, ಕಳೆದ ಎರಡು ವರ್ಷಗಳಿಂದ ಇಲ್ಲಿ ಡೇರೆ ಹಾಕಿಕೊಂಡು ಏಕ ಶ್ರೇಣಿ – ಏಕ ಪಿಂಚಣಿಯಲ್ಲಿ ತಮಗಾಗಿರುವ ಅನ್ಯಾಯವನ್ನು ಪ್ರತಿಭಟನೆ ನಿರತರಾಗಿರುವ ಮಾಜಿ ಸೈನಿಕರನ್ನು ಎತ್ತಂಗಡಿ ಮಾಡಿದರು.
ಜಂತರ್ ಮಂತರ್ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆ, ಧರಣಿ ನಡೆಸುವುದನ್ನು ಇದೇ ಅಕ್ಟೋಬರ್ 5ರಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿ ಆದೇಶ ಹೊರಡಿಸಿತ್ತು.
”ಪ್ರತಿಭಟನೆ ನಿರತ ಮಾಜಿ ಸೈನಿಕರಿಗೆ ನಾವು ಎನ್ಜಿಟಿ ಆದೇಶದ ಪ್ರಕಾರ ಎತ್ತಂಗಡಿ ಮಾಡುವ ಬಗ್ಗೆ ಸಾಕಷ್ಟು ಮುಂಚಿತವಾಗಿ ತಿಳಿಸಿದ್ದೆವು. ಅದಿಲ್ಲದಿದ್ದರೆ ಕೋರ್ಟಿಗೆ ಹೋಗಿ ಎನ್ಜಿಟಿ ಆದೇಶಕ್ಕೆ ತಡೆಯಾಜ್ಞೆ ತನ್ನಿ ಎಂದು ಹೇಳಿದ್ದೆವು. ಅಂತೆಯೇ ಇಂದು ಪ್ರತಿಭಟನೆ ನಿರತ ಮಾಜಿ ಸೈನಿಕರನ್ನು ತೆರವುಗೊಳಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಸತ್ತೆಯಲ್ಲಿ ನಮ್ಮ ಧ್ವನಿಯನ್ನು ಅಡಗಿಸುವ ಹುನ್ನಾರ ಇದಾಗಿದೆ ಎಂದು ಮೇಜರ್ ಜನರಲ್ (ನಿವೃತ್ತ) ಸತ್ಬೀರ್ ಸಿಂಗ್ ಹೇಳಿದ್ದಾರೆ.