ಅಮರನಾಥ ಯಾತ್ರಿಗಳ ಮೇಲೆ ದಾಳಿ; ಮಾಸ್ಟರ್ ಮೈಂಡ್ ಪಾಕ್ ನ ಇಸ್ಮಾಯಿಲ್!
Team Udayavani, Jul 11, 2017, 10:59 AM IST
ಶ್ರೀನಗರ್:ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರಿಗಳ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದ ಕೈವಾಡ ಇದೆಯೇ ಎಂಬ ಬಗ್ಗೆ ಭದ್ರತಾ ಪಡೆ ತನಿಖೆ ನಡೆಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಅಮರನಾಥ ಯಾತ್ರಿಗಳ ಮೇಲೆ ಲಷ್ಕರ್ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯ ಮಾಸ್ಟರ್ ಮೈಂಡ್ ಪಾಕ್ ಉಗ್ರ ಇಸ್ಮಾಯಿಲ್ ಎಂಬುದಾಗಿ ಜಮ್ಮು ಮತ್ತು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ ಮುನೀರ್ ಖಾನ್ ಎಎನ್ಐ ನ್ಯೂಸ್ ಏಜೆನ್ಸಿ ಜತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿಯಾಗಿದೆ.
ಅಮರನಾಥ ಯಾತ್ರಿಗಳ ಮೇಲೆ ಉಗ್ರರು ಸೋಮವಾರ ದಾಳಿ ನಡೆಸಿದ್ದು, ಐವರು ಮಹಿಳೆ ಯರೂ ಸೇರಿದಂತೆ ಏಳು ಮಂದಿ ಅಸುನೀಗಿದ್ದರು. ಈ ಘಟನೆಯಲ್ಲಿ 32 ಮಂದಿ
ಗಾಯಗೊಂಡಿದ್ದರು.
ಅನಂತ್ನಾಗ್ ಜಿಲ್ಲೆಯ ಪೆಹೆಲ್ಗಾಂವ್ನಿಂದ 50 ಕಿಮೀ ದೂರದ ಸ್ಥಳದಲ್ಲಿ ಸೋಮವಾರ ರಾತ್ರಿ 8.20ಕ್ಕೆ ಈ ದುರಂತ ನಡೆದಿದೆ. ದುರಂತದಲ್ಲಿ ಸಾವಿಗೀಡಾದವರೆಲ್ಲ ಗುಜರಾತ್ನ ವಲ್ಸಾಡ್ಗೆ ಸೇರಿದವರು. ಈ ಸಾಲಿನ ಅಮರನಾಥ ಯಾತ್ರೆ ಮೇಲೆ ಇದು ಮೊದಲ ಉಗ್ರ ದಾಳಿಯಾಗಿದೆ.
2000ನೇ ಇಸ್ವಿಯಲ್ಲಿ ಯಾತ್ರೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ 30 ಮಂದಿ ಅಸುನೀಗಿದ್ದರು. ಅದಾದ ಬಳಿಕ ನಡೆದ ಅತ್ಯಂತ ಹೇಯ ಕೃತ್ಯ ಇದಾಗಿದೆ.