ಧರ್ಮಸಭೆಯಲ್ಲಿ 1992ರ ಘಟನೆ ಮರುಕಳಿಸೀತು: ಬಿಜೆಪಿ ಶಾಸಕ
Team Udayavani, Nov 24, 2018, 6:00 AM IST
ಬಲಿಯಾ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾನುವಾರ ಮತ್ತೂಂದು ಬೃಹತ್ ಧರ್ಮ ಸಭೆಯನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರವನ್ನು ಒತ್ತಾಯಿಸುವ ಈ ಸಭೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಈ ಮಧ್ಯೆ ಕಾರ್ಯಕ್ರಮದ ಬಗ್ಗೆ ಬಲಿಯಾದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅಗತ್ಯವಿದ್ದರೆ 1992ರ ಘಟನೆ ಮರುಕಳಿಸಬಹುದು ಎಂದಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಲಾಗಿತ್ತು. ರಾಮ ಮಂದಿರವನ್ನು ಹಿಂದೂ ಸಂಘ ಟನೆಗಳೇ ನಿರ್ಮಿಸುತ್ತವೆ. ರಾಮನ ವಿಚಾರದಲ್ಲಿ ಕಾನೂನು ಸುವ್ಯವಸ್ಥೆ ಒಂದು ಸಮಸ್ಯೆಯೇ ಅಲ್ಲ. ಅದನ್ನು ನಾವೇ ನಿರ್ವಹಿಸುತ್ತೇವೆ ಎಂದಿದ್ದಾರೆ.
17 ನಿಮಿಷದಲ್ಲಿ ಕೆಡವಿದ್ದೆವು: ಬಾಬ್ರಿ ಮಸೀದಿಯನ್ನು 17 ನಿಮಿಷಗಳಲ್ಲಿ ನಾವು ಕೆಡವಿದ್ದೆವು. ಆದರೆ ರಾಮ ಮಂದಿರ ನಿರ್ಮಾಣ ಮಾಡಲು ಯಾಕೆ ಸರ್ಕಾರ ಇಷ್ಟು ವಿಳಂಬ ಮಾಡುತ್ತಿದೆ ಎಂದು ಶಿವಸೇನೆ ಪ್ರಶ್ನಿಸಿದೆ.
ಜಾಮಾ ಮಸೀದಿ ಕೆಡವಿದರೆ ಮೂರ್ತಿ ಸಿಗುತ್ತದೆ!
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿವಾದದ ಮಧ್ಯೆಯೇ ದೆಹಲಿ ಜಾಮಾ ಮಸೀದಿಯನ್ನು ಕೆಡವಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ. ಜಾಮಾ ಮಸೀದಿಯ ಮೆಟ್ಟಿಲಿನ ಕೆಳಗೆ ಮೂರ್ತಿಗಳು ಸಿಗದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬಂದ ಮೊದಲ ದಿನದಿಂದಲೂ ಈ ಮಾತನ್ನು ಹೇಳುತ್ತಿದ್ದೇನೆ. ಈಗಲೂ ಈ ಮಾತಿಗೆ ನಾನು ಬದ್ಧ ಎಂದಿದ್ದಾರೆ.