ಹತ್ಯೆಗೀಡಾದ ವ್ಯಕ್ತಿ ಬಳಿ ಇದ್ದದ್ದು ಗೋಮಾಂಸವೇ
Team Udayavani, Jul 9, 2017, 3:25 AM IST
ರಾಮ್ಗಡ (ಝಾರ್ಖಂಡ್): ದಿಲ್ಲಿ ಹೊರವಲಯದ ಪ್ರದೇಶದಲ್ಲಿ ಗೋಮಾಂಸ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಯುವಕನ ಹತ್ಯೆ ನಡೆದಿದ್ದ ಬೆನ್ನಲ್ಲೇ ಜಾರ್ಖಂಡ್ನ ರಾಮ್ಗಡದಲ್ಲಿ ಅದೇ ಮಾದರಿಯ ಘಟನೆ ನಡೆದಿತ್ತು. ಅದಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ವರದಿ ಪ್ರಕಟವಾಗಿದೆ. ಅದರ ಪ್ರಕಾರ ಹತ್ಯೆಗೀಡಾದ ವ್ಯಕ್ತಿ ಗೋಮಾಂಸವನ್ನೇ ಸಾಗಿಸುತ್ತಿದ್ದ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಈ ಅಂಶವನ್ನು ರಾಮ್ಗಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಕೌಶಲ್ ಹೇಳಿದ್ದಾರೆ.
ಗುಂಪಿನಿಂದ ಹತ್ಯೆಗೀಡಾದ ವ್ಯಕ್ತಿ ಅಲಿಮುದ್ದೀನ್ ಅನ್ಸಾರಿಗೆ ಕ್ರಿಮಿನಲ್ ಹಿನ್ನೆಲೆ ಕೂಡ ಇತ್ತು ಎಂದು ಅವರು ಹೇಳಿದ್ದಾರೆ. ಆತನ ವಿರುದ್ಧ ಮಗುವಿನ ಹತ್ಯೆ ಮತ್ತು ಕಳವಿನ ಒಂದು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಮತ್ತು ಹೊಸದಿಲ್ಲಿ ಹೊರವಲಯದಲ್ಲಿ ನಡೆದ ಥಳಿತ ಮತ್ತು ಹತ್ಯೆ ಪ್ರಕರಣಗಳ ವಿರುದ್ಧ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿತ್ತು.