ಕೋವಿಡ್ ಹೆಚ್ಚಳಕ್ಕೆ ನೀವೇ ಕಾರಣ : ಚು.ಆಯೋಗಕ್ಕೆ ತರಾಟೆಗೆ ತೆಗೆದುಕೊಂಡ ಮದ್ರಾಸ್ ಹೈಕೋರ್ಟ್
Team Udayavani, Apr 26, 2021, 3:23 PM IST
ತಮಿಳುನಾಡು: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಫುಲ್ ಗರಂ ಆಗಿದೆ. ಮಿತಿ ಮೀರಿ ವ್ಯಾಪಿಸುತ್ತಿರುವ ಕೋವಿಡ್ ಸೋಂಕಿಗೆ ನೀವೇ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದೆ.
ಮೇ 2 ರಂದು ನಡೆಯಲಿರುವ ಕರೂರ್ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೈಗೊಳ್ಳಲಾದ ಮುನ್ನೆಚ್ಚರಿಕೆ ಕೈಮಗಳ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ( ಏಪ್ರಿಲ್ 26) ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿತು.
ಸದ್ಯದ ಪರಿಸ್ಥಿತಿಗೆ ನಿಮ್ಮ ಆಯೋಗವೆ ಜವಾಬ್ದಾರಿ. ನ್ಯಾಯಾಲಯದ ಆದೇಶದ ಹೊರತಾಗಿಯೂ ನಡೆದ ಚುನಾವಣಾ ಜಾಥಾಗಳ ವಿರುದ್ಧ ನೀವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ಚುನಾವಣಾ ಜಾಥಾಗಳಿಗೆ ಅನುಮತಿ ನೀಡಿದ್ದಕ್ಕೆ ನಿಮ್ಮ ಮೇಲೆ ಕೊಲೆ ಆರೋಪದಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಕಿಡಿ ಕಾರಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಜಾಥಾಗಳು ನಡೆಯುತ್ತಿದ್ದಂತಹ ಸುಂದರ್ಭದಲ್ಲಿ ನೀವೇನು ಅನ್ಯ ಗ್ರಹಕ್ಕೆ ಹೋಗಿದ್ದಿರಿ? ಎಂದು ಪ್ರಶ್ನಿಸಿರುವ ಮುಖ್ಯ ನಾಯಾಮೂರ್ತಿ ಬ್ಯಾನರ್ಜಿ, ನಿಮ್ಮ ನಿರ್ಲಕ್ಷದ ಕಾರಣವಾಗಿಯೇ ಈ ಪ್ರಮಾಣದಲ್ಲಿ ಕೋವಿಡ್ ಹೆಚ್ಚಳವಾಗಿದೆ. ನಿಮ್ಮ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದರೆ ತಪ್ಪೆನಿಲ್ಲ ಎಂದು ವಾಗ್ದಾಳಿ ನಡೆಸಿದೆ.