ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ
Team Udayavani, Oct 2, 2020, 1:15 AM IST
ಹೊಸದಿಲ್ಲಿ: “”ರೈತರಿಗೆ ನೀಡಲಾಗುತ್ತಿರುವ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಸೌಲಭ್ಯವು ಇನ್ನು ಮುಂದೆಯೂ ಜಾರಿಯಲ್ಲಿರಲಿದಲ್ಲೆ, ಎಂಎಸ್ಪಿಯನ್ನು ಆಗಾಗ ಹೆಚ್ಚಿಸಲಾಗುತ್ತಿರುತ್ತದೆ. ಹಾಗಾಗಿ, ರೈತಾಪಿ ಜನರು ಆ ಬಗ್ಗೆ ದಿಗಿಲುಗೊಳ್ಳಬೇಕಿಲ್ಲ” ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಗುರುವಾರದಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನೂ ಒಬ್ಬ ರೈತನ ಮಗನಾಗಿ ಕೃಷಿ ಮಸೂದೆಗಳ ಅನುಕೂಲತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಮೋದಿ ಸರಕಾರ, ರೈತರ ಹಿತ ಕಾಯುವ ನಿರ್ಧಾರವನ್ನು ಎಂದಿಗೂ ಕೈಗೊಳ್ಳುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ತಿಳಿಸಬಯಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ, ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಕೃಷಿ ಮಸೂದೆಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ರೈತರ ಟ್ರ್ಯಾಕ್ಟರೊಂದಕ್ಕೆ ಬೆಂಕಿ ಹಚ್ಚಿದ್ದನ್ನು ಸಿಂಗ್ ತೀವ್ರವಾಗಿ ಖಂಡಿಸಿದರು. “”ಸೈನಿಕರಿಗೆ ಬಂದೂಕುಗಳು ಹೇಗೆ ಪವಿತ್ರವಾದ ಅಸ್ತ್ರವೋ ಹಾಗೆಯೇ ರೈತರಿಗೆ ಟ್ರ್ಯಾಕ್ಟರ್ ಕೂಡ ಪವಿತ್ರವಾದ ಅಸ್ತ್ರ. ಅಂಥ ಅಸ್ತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಭಾರತದ ಇಡೀ ರೈತ ಸಮುದಾಯಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ” ಎಂದರು.