ಮಾನಸ ಸರೋವರ ನಮಗೆ ಇನ್ನಷ್ಟು ಹತ್ತಿರ ; ಹೊಸ ರಸ್ತೆ ಮಾರ್ಗ ಉದ್ಘಾಟನೆ
Team Udayavani, May 10, 2020, 9:32 PM IST
ಪಿತೋರ್ಘಡ/ಹೊಸದಿಲ್ಲಿ: ಕೈಲಾಸ ಮಾನಸ ಸರೋವರ ಯಾತ್ರೆ ಇನ್ನು 80 ಕಿಮೀಗಳಷ್ಟು ಕಡಿಮೆಯಾಗಲಿದೆ.
ಭಾರತ ಮತ್ತು ಚೀನ ಗಡಿಯಲ್ಲಿರುವ ದೇಶದ ಕಟ್ಟಕಡೆಯ ಚೆಕ್ ಪೋಸ್ಟ್ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸುವ ಮೂಲಕ ಮಾನಸ ಸರೋವರಕ್ಕೆ ತೆರಳುವ ಆಸ್ತಿಕ ಬಂಧುಗಳಿಗೆ ಈ ಪ್ರಯೋಜನ ಲಭ್ಯವಾಗಲಿದೆ.
ಘಾಟಿಯಾಬಗರ್ – ಲಿಪುಲೇಕ್ ಪಾಸ್ ನಡುವೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಬಳಿಕ ಮಾತನಾಡಿದ ಸಚಿವರು, ಈ ರಸ್ತೆಯಿಂದಾಗಿ ಲಿಪುಲೇಕ್ ಪಾಸ್ ಮೂಲಕ ಕೈಲಾಸ – ಮಾನಸ ಸರೋವರ ಯಾತ್ರೆ ತೆರಳುವವರಿಗೆ ಹೆಚ್ಚು ಅನುಕೂಲವಾಗಲಿದೆ.
ಯಾತ್ರಿಗಳು ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದು ಕೇವಲ ಒಂದೇ ದಿನದಲ್ಲಿ ಭಾರತಕ್ಕೆ ವಾಪಸಾಗಬಹುದು ಎಂದರು. ಈ ರಸ್ತೆಯಿಂದಾಗಿ ತವಾಗತ್ ಬಳಿಯ ಮಂಗ್ತಿ ಮತ್ತು ವ್ಯಾಸ ಕಣಿವೆಯಲ್ಲಿನ ಗುಂಜಿ ಪ್ರದೇಶಗಳಿಗೆ ಮತ್ತು ಗಡಿಯಲ್ಲಿ ಭಾರತದ ಭೂಪ್ರದೇಶದಲ್ಲಿರುವ ಭದ್ರತಾ ಪೋಸ್ಟ್ಗಳಿಗೆ ಸಂಪರ್ಕ ಸುಲಭವಾದಂತಾಗಿದೆ.