ಮಣಿ ನೀಚ ಮಾತಿಗೆ ಅಮಾನತು ಶಿಕ್ಷೆ
Team Udayavani, Dec 8, 2017, 6:20 AM IST
ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಚಾಯ್ವಾಲಾ’ ಎಂದು ಕರೆದು, ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಅಂಥದ್ದೇ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಮತ್ತಷ್ಟು ಸಂಕಷ್ಟ ಸೃಷ್ಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ “ನೀಚ’ ಎಂಬ ಪದ ಪ್ರಯೋಗ ಮಾಡಿರುವ ಮಣಿಶಂಕರ್ ಅಯ್ಯರ್, ಸ್ವತಃ ತಮ್ಮ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಖಡಕ್ ಸೂಚನೆ ಮೇರೆಗೆ ಅಯ್ಯರ್ ಕ್ಷಮೆಯನ್ನೂ ಕೋರಿದ್ದಾರೆ. ಆದರೆ, ಮಣಿಶಂಕರ್ ಅಯ್ಯರ್ ಅವರ ಕ್ಷಮೆ ಒಪ್ಪದ ಕಾಂಗ್ರೆಸ್, ಅವರನ್ನು ಪಕ್ಷದಿಂದಲೇ ಅಮಾನತು ಮಾಡಿದೆ. ಜತೆಗೆ ಶೋಕಾಸ್ ನೋಟಿಸ್ ಅನ್ನೂ ಜಾರಿ ಮಾಡಿದೆ. ನೀವು ಬಿಜೆಪಿ ಜತೆಗೆ ಕೈಜೋಡಿಸಿ ಇಂಥ ಹೇಳಿಕೆ ನೀಡಿದ್ದೀರಿ ಎಂದು ಅದು ಈ ಶೋಕಾಸ್ ನೋಟಿಸ್ನಲ್ಲಿ ಉಲ್ಲೇಖೀಸಿದೆ. ಈ ಬಗ್ಗೆ ವಿವರಣೆ ಕೊಡಿ ಎಂದೂ ಸೂಚನೆ ನೀಡಿದೆ.
ಈ ಮಧ್ಯೆ, ಅಯ್ಯರ್ ಅವರ ನೀಚ ಪದ ಪ್ರಯೋಗದ ಬಗ್ಗೆ ಗುರುವಾರ ಮಧ್ಯಾಹ್ನವೇ ನರೇಂದ್ರ ಮೋದಿ ಅವರು ಪ್ರಸ್ತಾವಿಸಿದ್ದಾರೆ. ಗುಜರಾತ್ನ ಸೂರತ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಅಯ್ಯರ್ ಇಡೀ ಗುಜರಾತ್ಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ. ಇದಷ್ಟೇ ಅಲ್ಲ, ಅವರು ನನ್ನದು ನೀಚ ಜಾತಿ ಎಂದು ಕರೆದಿದ್ದಾರೆ. ಈ ಮೂಲಕ ಇಡೀ ಗುಜರಾತ್ಗೆ ಅವಮಾನ ಮಾಡಿಲ್ಲವೇ ಎಂದು ರ್ಯಾಲಿಯಲ್ಲೇ ಜನರನ್ನು ಪ್ರಶ್ನಿಸಿದ್ದಾರೆ. ಜತೆಗೆ ನೀವು (ಕಾಂಗ್ರೆಸ್) ನನ್ನನ್ನು ಕತ್ತೆ, ಕೆಸರಲ್ಲಿನ ಹುಳ, ಸಾವಿನ ವ್ಯಾಪಾರಿ ಎಂದು ಕರೆದಿರಿ, ಈಗ ನೀಚ ಎಂದು ನನ್ನ ಜಾತಿಯನ್ನೇ ಉದ್ದೇಶಿಸಿ ಕರೆದಿದ್ದೀರಿ. ಆದರೆ ನಾವು ಉತ್ತಮ ಸಂಸ್ಕಾರದಿಂದಲೇ ಜೀವನ ನಡೆಸುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೆ ಇದು ಮೊಘಲ್ ಮನಃಸ್ಥಿತಿಯಾಗಿದ್ದು, ಮಹತ್ವಾಕಾಂಕ್ಷೆಯುಳ್ಳ ಹಳ್ಳಿಯ ವ್ಯಕ್ತಿಯೊಬ್ಬ ಉತ್ತಮ ಬಟ್ಟೆ ಧರಿಸುವುದೇ ಅವರಿಗೆ ಸಹಿಸಲು ಅಸಾಧ್ಯವಾದ ವಿಷಯವಾಗಿದೆ ಎಂದೂ ಕಾಂಗ್ರೆಸ್ ಅನ್ನು ವ್ಯಾಪಕವಾಗಿ ಟೀಕೆಗೊಳಪಡಿಸಿದ್ದಾರೆ.
ಜತೆಗೆ, ಬಡವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನ ವನ್ನೇ ಮುಡುಪಾಗಿಟ್ಟ ಮಹಾತ್ಮಾ ಗಾಂಧಿ ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಿದ್ದೇನೆ. ಅಂತೆಯೇ ಕೆಳ ವರ್ಗಕ್ಕೆ ಸೇರಿದ ನಾನೂ “ನೀಚ’ (ಕೆಳ ವರ್ಗದವರು) ಜನರ ಜತೆಗೆ ಕುಳಿತು ಅವರಿಗಾಗಿಯೇ ಕೆಲಸ ಮಾಡುತ್ತೇನೆ ಎಂದೂ ಇದೇ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಇನ್ನು, ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಅವರು, “ಅಯ್ಯರ್ ಹೇಳಿಕೆಯು, ರಾಜಮನೆತನದವರಷ್ಟೇ (ನೆಹರೂ-ಗಾಂಧಿ ಕುಟುಂಬ) ಉಚ್ಚ ಸ್ಥಾನದಲ್ಲಿರಬೇಕು. ಉಳಿದವರು ನೀಚ ಸ್ಥಾನ ದಲ್ಲಿರಬೇಕು ಎಂಬ ಕಾಂಗ್ರೆಸ್ನ ಮನಃಸ್ಥಿತಿಯನ್ನು ತೋರಿಸಿದೆ’ ಎಂದಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡ ಇದಕ್ಕೆ ದನಿಗೂಡಿಸಿದ್ದು, ಸಮಾಜದ ಕೆಳ ಹಂತದಿಂದ ಬಂದು ಉನ್ನತ ಸ್ಥಾನ ತಲುಪಿದ ಯಾವುದೇ ವ್ಯಕ್ತಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂಬುದನ್ನು ಅಯ್ಯರ್ ಹೇಳಿಕೆ ತೋರಿಸಿದೆ ಎಂದಿದ್ದಾರೆ.
ಮಣಿ ಅಮಾನತು: ಘಟನೆಯ ಗಂಭೀರತೆ ಬಗ್ಗೆ ತತ್ಕ್ಷಣವೇ ಎಚ್ಚೆತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್ ಬಳಿ ಕ್ಷಮೆ ಕೋರಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಯ್ಯರ್, “ತಮಗೆ ಹಿಂದಿ ಸರಿಯಾಗಿ ಬರೋದಿಲ್ಲ. ಹಾಗಾಗಿ, ನನ್ನಿಂದ ತಪ್ಪು ಪದವೊಂದು ಬಳಕೆಯಾಗಿ ತಪ್ಪಾಗಿದೆ. ಇದಕ್ಕೆ ಕ್ಷಮೆ ಕೋರುತ್ತೇನೆ’ ಎಂದು ತಮ್ಮ ಕೈಲಾದ ಮಟ್ಟಿಗೆ ಗಾಯಕ್ಕೆ ಮುಲಾಮು ಹಚ್ಚಿದ್ದಾರೆ. ಜತೆಗೆ ಗುರುವಾರ ರಾತ್ರಿ ವೇಳೆಗೆ ಮಣಿಶಂಕರ್ ಅಯ್ಯರ್ ಅವರನ್ನು ಕಾಂಗ್ರೆಸ್ನಿಂದ ಅಮಾನತು ಮಾಡಿದೆ. ತಮ್ಮ “ನೀಚ’ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ಅವರಿಗೆ ಶೋಕಾಸ್ ನೋಟಿಸ್ ಅನ್ನೂ ಜಾರಿ ಮಾಡಿದೆ.
ರಾಹುಲ್ ಟ್ವೀಟ್: ಅಯ್ಯರ್ ಹೇಳಿಕೆ ಕುರಿತು ಪ್ರತಿ ಕ್ರಿಯಿಸಿರುವ ರಾಹುಲ್ ಗಾಂಧಿ, “ಈ ಹಿಂದೆಯೂ ಬಿಜೆಪಿ ಹಾಗೂ ಮೋದಿ ಕಾಂಗ್ರೆಸನ್ನು ಕೆಟ್ಟ ಶಬ್ದಗಳಿಂದ ಟೀಕಿಸಿದ್ದುಂಟು. ಆದರೆ, ಕಾಂಗ್ರೆಸ್ ಬೇರೆಯದೆ ಆದ ಸಂಸ್ಕೃತಿ ಹೊಂದಿದೆ. ಅಯ್ಯರ್ ಬಳಸಿದ ಪದ ಹಾಗೂ ಅವರ ಧ್ವನಿ ಒಪ್ಪುವಂಥದ್ದಲ್ಲ. ಮೋದಿ ದೇಶದ ಪ್ರಧಾನಿ. ಅವರನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅವರನ್ನು ಹೇಗೆಲ್ಲ ಟೀಕಿಸಲಾಗಿತ್ತು ಎಂಬುದು ನಮಗೆ ನೆನಪಿದೆ. ಆದರೆ, ನಾವು ಮೋದಿಯವರಿಗೆ ಅಂಥ ಟೀಕೆಗಳನ್ನು ಮಾಡುವುದಿಲ್ಲ. ಅಯ್ಯರ್ ಹೇಳಿಕೆಗಾಗಿ ಕಾಂಗ್ರೆಸ್ ಪರವಾಗಿ ನಾನು ಕ್ಷಮೆ ಕೋರುತ್ತಿದ್ದೇನೆ’ ಎಂದಿದ್ದಾರೆ.
ಬಿಎಸ್ವೈ ಖಂಡನೆ: ಮೋದಿ ಅವರನ್ನು ಅಯ್ಯರ್ ನೀಚ ವ್ಯಕ್ತಿ ಎಂದು ಹೇಳಿರುವುದು ಖಂಡನೀಯ. ಇದು
ಕಾಂಗ್ರೆಸ್ನ ಅಸಹನೆ, ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿ ಸುತ್ತಿದೆ. ಹಿಂದುಳಿದ, ಚಹಾ ಮಾರುವ ವ್ಯಕ್ತಿಯೊಬ್ಬ
ದೇಶದ ಪ್ರಧಾನಿ ಆಗಿರುವುದಕ್ಕೆ ವಿಶ್ವವೇ ಹೆಮ್ಮೆಪಟ್ಟು ಅಚ್ಚರಿಯಿಂದ ನೋಡುತ್ತಿದೆ. ಹಾಗಿದ್ದಾಗ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿರುವ ಅಯ್ಯರ್ ಅವರೇ ನೀಚ ಬುದ್ಧಿಯ ವ್ಯಕ್ತಿ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅಯ್ಯರ್ ಹೇಳಿದ್ದೇನು?
ಡಾ| ಬಿ.ಆರ್. ಅಂಬೇಡ್ಕರ್ ಹೆಸರಲ್ಲಿ ಮತ ಕೇಳಲು ಕಾಂಗ್ರೆಸ್ಗೆ ಯಾವುದೇ ಅರ್ಹತೆ ಇಲ್ಲ ಎಂಬ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಮಣಿಶಂಕರ್ ಅಯ್ಯರ್ ಅವರು, “ಅವರೊಬ º (ಮೋದಿ) ನೀಚ ವ್ಯಕ್ತಿ. ಅವರಿಗೆ ಸಭ್ಯತೆ ಇಲ್ಲವೇ ಇಲ್ಲ’ ಎಂದು ಹೇಳಿದ್ದರು. ಆದರೆ ಇದೇ ಮಾತು ಮಣಿ ಅವರಿಗೆ ಉರುಳಾಗಿ ಪರಿಣಮಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ