ಆಧಾರ್ ಸೇವೆಗೆ ವ್ಯವಸ್ಥೆ ಸರಿ ಇಲ್ಲ: ಬ್ಯಾಂಕ್ ನೌಕರರ ಸಂಘ
Team Udayavani, Nov 5, 2017, 6:30 AM IST
ಮುಂಬೈ: ಪ್ರತಿ ಹತ್ತು ಶಾಖೆಗಳಿಗೆ ಒಂದರಂತೆ ಆಧಾರ್ ಸೇವಾ ಕೇಂದ್ರ ಸ್ಥಾಪಿಸಬೇಕು ಎಂಬ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ)ದ ಆದೇಶಕ್ಕೆ ಬ್ಯಾಂಕ್ ನೌಕರರಿಂದ ಅಪಸ್ವರ ಕೇಳಿಬಂದಿದೆ.
ಆ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸಂಪನ್ಮೂ ಲದ ಕೊರತೆ ಇದೆ ಎಂದು ಅಖೀಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (ಎಐಓಬಿಸಿ)ಸುಪ್ರೀಂ ಕೋರ್ಟ್ಗೆ ಸಲ್ಲಿಸಿ ರುವ ಅರ್ಜಿಯಲ್ಲಿ ಅರಿಕೆ ಮಾಡಿಕೊಂಡಿದೆ. ಈ ಬಗ್ಗೆ ಮಾತ ನಾಡಿದ ಎಐಓಬಿಸಿ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೋ, ಆಧಾರ್ನಲ್ಲಿ ಖಾಸಗಿತನ ಮತ್ತು ಭದ್ರತೆಯ ವಿಚಾರಗಳ ಹಗ್ಗೆ ಹಲವು ಪ್ರಶ್ನೆಗಳಿವೆ. ಆಧಾರ್ ಕಾರ್ಡ್ ಮಾಹಿತಿ ನೀಡುವುದರಲ್ಲಿ ತಪ್ಪಾದರೂ ಬ್ಯಾಂಕ್ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ. ಅವುಗಳನ್ನು ಪತ್ತೆ ಮಾಡುವುದು ಅಧಿಕಾರಿಗಳ ಕೆಲಸವಲ್ಲ. ಈಗಾಗಲೇ ಆಧಾರ್ ನಕಲು ಆರೋಪದಲ್ಲಿ 49 ಸಾವಿರ ಕೇಂದ್ರಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ, ಈ ಕೆಲಸವನ್ನು ನಿರ್ವಹಿಸಲು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ, ನೋಟು ಅಮಾನ್ಯ ವೇಳೆ ಹೆಚ್ಚುವರಿ ಗಂಟೆ ಕೆಲಸ ಮಾಡಿದ್ದಕ್ಕೆ ಸಂಭಾವನೆ ಇದುವರೆಗೆ ದೊರೆತಿಲ್ಲ ಎಂದೂ ಹೇಳಿದ್ದಾರೆ.