ನನ್ನ ಕೇರಳ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿದ್ರೆ ಬಿಜೆಪಿಗೆ ಅಧಿಕಾರದ ಗದ್ದುಗೆ: ಶ್ರೀಧರನ್
ನಾನು ವಿದ್ಯಾರ್ಥಿಯಾಗಿದ್ದಾಗಲೇ, ಆರ್ ಎಸ್ ಎಸ್ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ.
Team Udayavani, Feb 20, 2021, 3:45 PM IST
ನವದೆಹಲಿ: ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಇ.ಶ್ರೀಧರನ್ ಕೇರಳದಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಇನಿಂಗ್ಸ್ ಪ್ರಾರಂಭಿಸಲು ಸಿದ್ಧರಾಗಿದ್ದು, ಏತನ್ಮಧ್ಯೆ ತಾನು ಕೇರಳದ ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂಬುದಾಗಿ ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಟೀಕೆ; BSP ಮಾಜಿ ಎಂಪಿ ವಿರುದ್ಧ ಬಿಜೆಪಿ ಉಪಾಧ್ಯಕ್ಷೆ ಶಾಜಿಯಾ ದೂರು
ಒಂದು ವೇಳೆ ಭಾರತೀಯ ಜನತಾ ಪಕ್ಷ ತನ್ನನ್ನು(ಇ.ಶ್ರೀಧರನ್) ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದರೆ ಬಿಜೆಪಿಗೆ ಭರ್ಜರಿ ಲಾಭವಾಗಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಒಂದು ವೇಳೆ ನನಗೆ ರಾಜ್ಯಪಾಲರಾಗುವ ಆಫರ್ ಕೊಟ್ಟರೂ ಕೂಡಾ ನನಗೆ ಆ ಬಗ್ಗೆ ಆಸಕ್ತಿ ಇಲ್ಲ. ಆದರೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಪಕ್ಷ ನಿರ್ಧರಿಸಬೇಕು. ನನ್ನ ಭಾವನೆ ಪ್ರಕಾರ ಒಂದು ವೇಳೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದರೆ ರಾಜ್ಯದಲ್ಲಿನ ಎರಡೂ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿರುವ ಬಹುದೊಡ್ಡ ಸಂಖ್ಯೆಯ ಜನರು ತನ್ನೊಂದಿಗೆ ಕೈಜೋಡಿಸಲಿದ್ದಾರೆ. ಇದರಿಂದ ಬಿಜೆಪಿಗೆ ಅಧಿಕಾರದ ಗದ್ದುಗೆ ಏರುವಷ್ಟು ಸ್ಥಾನ ಲಭ್ಯವಾಗಲಿದೆ ಎಂದರು.
ಆರಂಭದಿಂದಲೂ ಆರ್ ಎಸ್ ಎಸ್, ಬಿಜೆಪಿ ಪರ:
ಬಹು ಹಿಂದಿನಿಂದಲೂ ನಾನು ಬಿಜೆಪಿ ಪರ ಸಹಾನುಭೂತಿ ಹೊಂದಿದ್ದವನು. ನಾನು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಆದರೆ ಆರಂಭದಿಂದಲೂ ನಾನು ಬಿಜೆಪಿ ಪರವಾಗಿದ್ದವನು. ಮುಖ್ಯವಾಗಿ ನಾನು ವಿದ್ಯಾರ್ಥಿಯಾಗಿದ್ದಾಗಲೇ, ಆರ್ ಎಸ್ ಎಸ್ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ. ಸಹಜವಾಗಿ ನಾನು ಬಿಜೆಪಿಯಿಂದಲೇ ಬೆಳೆದಿದ್ದೇನೆ. ಬಿಜೆಪಿ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗೆ ನನ್ನ ಆಯ್ಕೆ ಕೂಡಾ ಬಿಜೆಪಿಯೇ ಆಗಿದೆ ಎಂದು ಶ್ರೀಧರನ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹೊಗಳಿದ ಶ್ರೀಧರನ್, ಕೇರಳ ರಾಜ್ಯ ಸರ್ಕಾರದ ವಿರುದ್ಧ ಕಟುವಾಗಿ ಟೀಕೆ ವ್ಯಕ್ತಪಡಿಸಿದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರ ರಾಜ್ಯದಲ್ಲಿ ಯಾವುದೇ ದೊಡ್ಡ ಯೋಜನೆ ತರುವಲ್ಲಿ ಸಫಲವಾಗಿಲ್ಲ. ರಾಜ್ಯದಲ್ಲಿನ ಶಿಕ್ಷಿತ ಯುವಕರಿಗೆ ಯಾವುದೇ ಕೈಗಾರಿಕೆಗಳು ಇಲ್ಲಿಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ನಿಲಾಂಬುರ್ ರೈಲು ಯೋಜನೆ ಇನ್ನಷ್ಟೇ ಕಾರ್ಯಗತವಾಗಬೇಕಾಗಿದೆ ಎಂದು ತಿಳಿಸಿದರು.