ದೇಶ ಉಳಿಸಲು ರೈತ ಒಕ್ಕೂಟ ಕರೆ
Team Udayavani, Sep 6, 2021, 7:30 AM IST
ಲಕ್ನೋ: ಉತ್ತರಪ್ರದೇಶ, ಸುತ್ತಮುತ್ತಲಿನ ರಾಜ್ಯಗಳ ಸಾವಿರಾರು ರೈತರು ರವಿವಾರ ಮುಜಫ್ಘರ್ನಗರದಲ್ಲಿ “ಕಿಸಾನ್ ಮಹಾಪಂಚಾಯತ್’ ನಡೆಸಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ “ದೇಶವನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಈ ಕಾರ್ಯಕ್ರಮ ಆಯೋಜಿಸಿತ್ತು.
“ದೇಶಾದ್ಯಂತ ಇಂಥ ಪಂಚಾಯತ್ಗಳು ನಡೆಯಲಿದ್ದು, ದೇಶವನ್ನು ಮಾರಾಟ ಮಾಡುವುದನ್ನು ನಾವು ತಡೆಯಬೇಕಾಗಿದೆ. ಅನ್ನದಾತರನ್ನು, ದೇಶವನ್ನು, ಯುವಕರನ್ನು, ಉದ್ಯೋಗಿಗಳನ್ನು ರಕ್ಷಿಸುವುದು ಈ ರ್ಯಾಲಿಯ ಉದ್ದೇಶ’ ಎಂದು ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಜತೆಗೆ, ಉ.ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಾಗಿಯೂ ಘೋಷಿಸಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಸೆ.27ರಂದು ಭಾರತ್ ಬಂದ್ಗೂ ಕರೆ ನೀಡಿದ್ದಾರೆ.
ಚುನಾವಣ ಸಭೆ ಎಂದ ಬಿಜೆಪಿ: ಅನ್ನದಾತರ ಮಹಾಪಂಚಾಯತ್ ಅನ್ನು ಬಿಜೆಪಿ “ಚುನಾವಣ ಸಭೆ’ ಎಂದು ಕರೆದಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರು ರಾಜಕೀಯ ಮಾಡಲು ಶುರು ಮಾಡಿದ್ದಾರೆ ಎಂದು ಹೇಳಿದೆ. ಇದೇ ವೇಳೆ, “ಪ್ರತಿಭಟನಕಾರ ರೈತರೂ ನಮ್ಮವರೇ ಆಗಿದ್ದು, ಕೇಂದ್ರ ಸರಕಾರವು ಅವರೊಂದಿಗೆ ಮಾತುಕತೆ ನಡೆಸುವುದು ಸೂಕ್ತ’ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.