ಗೃಹಬಂಧನದಲ್ಲಿದ್ದ ಮಹಿಳೆ ಸಾವು
Team Udayavani, Jul 12, 2018, 6:00 AM IST
ಬರೇಲಿ: ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಈ ಪದ್ಧತಿಯ ದುಷ್ಪರಿಣಾಮಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೇನೂ ಕಡಿಮೆಯಾಗುತ್ತಿಲ್ಲ. ಉತ್ತರಪ್ರದೇಶದ ಬರೇಲಿಯಲ್ಲಿ ತ್ರಿವಳಿ ತಲಾಖ್ಗೆ ಒಳಗಾದ ಮಹಿಳೆಯೊಬ್ಬರು ಬುಧವಾರ ಕೊನೆಯುಸಿರೆಳೆದಿದ್ದಾರೆ.
ಬರೇಲಿ ನಿವಾಸಿ ರಜಿಯಾ ಎಂಬಾಕೆಯೇ ಮೃತ ದುರ್ದೈವಿ. ಈಕೆಗೆ 6 ವರ್ಷದ ಮಗುವೂ ಇದೆ. ಪತಿ ನಹೀಂ ಈಕೆಗೆ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದ ಮಾತ್ರವಲ್ಲ, ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ತಲಾಖ್ ಬಳಿಕ ರಜಿಯಾಗೆ ನೀರು, ಆಹಾರ ನೀಡದೇ ಕೊಠಡಿಯಲ್ಲಿ ಕೂಡಿಹಾಕಿದ್ದ. ತಿಂಗಳ ಕಾಲ ಗೃಹಬಂಧನದಲ್ಲಿದ್ದ ರಜಿಯಾಳ ಆರೋಗ್ಯ ಹದಗೆಟ್ಟ ಬಳಿಕ ಸಂಬಂಧಿಯೊಬ್ಬರ ಮನೆಯಲ್ಲಿ ಬಿಟ್ಟು ಬಂದಿದ್ದ. ರಜಿಯಾಳ ಸೋದರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಳು.